ರಾಮನಗರ: ರಾಜ್ಯದಲ್ಲಿ ಕೊರೊನಾ ಎಫೆಕ್ಟ್ ಹೆಚ್ಚಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಲ್ಲಿ ಆತಂಕ ಸೃಷ್ಟಿ ಮಾಡ್ತಿದೆ. ಫೋನ್ನಲ್ಲಿ ನೂರು ಬಾರಿ ಕರೆ ಮಾಡಿದ್ರೂ ಕೆಮ್ಮು ಬರುತ್ತೆ, ನನಗೂ ಕೆಮ್ಮು, ಜ್ವರ ಬರ್ತಿದೆ. ಹಾಗಾಗಿ ಕೊರೊನಾಗೆ ವಿಶೇಷ ಬಜೆಟ್ ಮಂಡಿಸಬೇಕು ಎಂದು KPCC ಅಧ್ಯಕ್ಷ ಡಿ ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರು ರೈತರ ಕೋಳಿಗಳನ್ನ 20 ರೂಪಾಯಿಗೂ ತೆಗೆದುಕೊಳ್ತಿಲ್ಲ ಹಾಗೂ 10 ರೂಪಾಯಿಗೂ ತರಕಾರಿ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ.
ಈಗ ಬಂದ್ ಮಾಡಿದ್ದಾರಲ್ಲಾ ಎಂದರು. ಸಾಮಾನ್ಯ ಜ್ಞಾನದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಎಡವಿದೆ. ಬ್ಯಾಂಕ್ನವರಿಗೆ ಬಡ್ಡಿ ಹಾಕೋದನ್ನ ನಿಲ್ಲಿಸಲು ತಿಳಿಸಬೇಕು. ಜೊತೆಗೆ ಮೆಡಿಕಲ್ ಕಾಲೇಜು ಚೇರ್ಮನ್ಗಳನ್ನ ಕರೆದು ಸಭೆ ನಡೆಸಿ, ಎಲ್ಲಿಂದ ಯಾರಿಗೆ ವೈರಸ್ ಬರ್ತಿದೆ ಅದನ್ನ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಕನಕಪುರದಲ್ಲಿ ಕನಕಾಂಬರಿ ಸಂಘದ ಕಾರ್ಯಕ್ರಮ ಇತ್ತು. ಸುಮಾರು 8 ಸಾವಿರ ಮಹಿಳೆಯರು ಭಾಗಿಯಾಗುವ ಕಾರ್ಯಕ್ರಮ. ಆದರೆ, ಸಿಎಂ ಸಾರ್ವಜನಿಕ ಕಾರ್ಯಕ್ರಮಗಳನ್ನ ರದ್ದು ಮಾಡಿರುವ ಹಿನ್ನೆಲೆ ಆ ಕಾರ್ಯಕ್ರಮ ಮಾಡಿಲ್ಲ ಎಂದರು. ಅಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆಗೆ ಒತ್ತು ಕೊಡುತ್ತಿದ್ದೇನೆ. ಅದಕ್ಕಾಗಿ ಮುಂದೆ 28 ಬ್ಲಾಕ್ ಕಾಂಗ್ರೆಸ್ಗೆ ಭೇಟಿ ಕೊಡ್ತೇನೆ.
ಪ್ರತಿಯೊಬ್ಬ ಕಾರ್ಯಕರ್ತನನ್ನ ಭೇಟಿ ಮಾಡುತ್ತೇನೆ, ರಾಜ್ಯದ ಪ್ರತಿ ಜಿಲ್ಲೆಗೂ ಪ್ರವಾಸ ಮಾಡ್ತೇನೆ. ಈಗಾಗಲೇ ಅದಕ್ಕಾಗಿ ಪ್ರೋಗ್ರಾಮ್ ರೆಡಿ ಮಾಡ್ತಿದ್ದೇನೆ. ದಿನಕ್ಕೆ 7 ವಿಧಾನಸಭಾ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳುತ್ತೇನೆ. ಕನಕಪುರದಿಂದ ಅದು ಪ್ರಾರಂಭವಾಗಿದೆ. ಅದಕ್ಕಾಗಿ ಮನೆದೇವರ ಮೂಲಕ ಪ್ರವಾಸ ಪ್ರಾರಂಭ ಮಾಡಿದ್ದೇನೆ ಎಂದರು.
ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುತ್ತೇನೆ : ಬೆಂಗಳೂರು ನಗರದಲ್ಲಿರುವ ಹಿರಿಯ ನಾಯಕರನ್ನ ಭೇಟಿ ಮಾಡ್ತೇನೆ. ನಾನೊಬ್ಬ ಶಕ್ತಿಯುತವಾಗಿದ್ದರೆ ಸಾಲದು, ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಶಕ್ತಿ ಕೊಡಬೇಕು. ಜೊತೆಗೆ ಪರಾಜಿತ ಅಭ್ಯರ್ಥಿಗೂ ಶಕ್ತಿ ಕೊಡಬೇಕಿದೆ. ಅಲ್ಲದೆ ಪಕ್ಷದ ಕೆಲ ಹಿರಿಯ ನಾಯಕರು ಮನೆಯಲ್ಲಿದ್ದಾರೆ. ಅವರೆಲ್ಲರಿಗೂ ಶಕ್ತಿ ಕೊಡಬೇಕು. ಎಲ್ಲರಿಗೂ ಚೇರ್ ಕೊಡಲು ಸಾಧ್ಯವಿಲ್ಲ. ಆದರೆ, ಅವರಿಗೆಲ್ಲ ಪಕ್ಷದಲ್ಲಿ ಶಕ್ತಿ ತುಂಬಬೇಕಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಸ್ನೇಹದ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರನ್ನ ಉಳಿಸಬೇಕಿದೆ. ನಮ್ಮ ಪಕ್ಷದ ಸಿದ್ಧಾಂತ ಬೇರೆ, ಅವರ ಪಕ್ಷದ ಸಿದ್ಧಾಂತ ಬೇರೆ. ನನ್ನ ಪಕ್ಷಕ್ಕೆ ಮೊದಲ ಆದ್ಯತೆ ನೀಡುವುದು ನನ್ನ ಕರ್ತವ್ಯ ಎಂದು KPCC ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.