ರಾಯಚೂರು: 45 ದಿನಗಳ ನಂತರ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಇದರೊಂದಿಗೆ ಕುಮಾರಸ್ವಾಮಿ ಸರ್ಕಾರ ಅಂತ್ಯವಾಗಿ ಯಡಿಯೂರಪ್ಪನವರು ಸಿಎಂ ಆಗಲಿದ್ದಾರೆ ಶಾಸಕ ಶಿವನಗೌಡ ನಾಯಕ ಭವಿಷ್ಯ ನುಡಿದಿದ್ದಾರೆ.
ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅಂಬರೀಶ್ ಅವರ ದೊಡ್ಡ ಅಭಿಮಾನಿ. ಹೀಗಾಗಿ ಸುಮಲತಾ ಅವರ ಗೆಲುವಿಗೆ ಇಂದು ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದೀನಿ. ಸುಮಲತಾ ಅವರಿಗೆ ಸಿಎಂ ಕುಮಾರಸ್ವಾಮಿ ಕೇವಲವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಓರ್ವ ಮಹಿಳೆ ಎನ್ನದೇ ನಾಲಿಗೆ ಹರಿಬಿಟ್ಟಿದ್ದಾರೆ. ಅವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸುಮಲತಾ ಪರವಾಗಿ ಪ್ರಚಾರ ಮಾಡಲು ಬರುವ ಚಿತ್ರನಟರಿಗೆ ಧಮ್ಕಿ, ಕಲ್ಲು ತೂರಾಟ ನಡೆಸಿ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಶಿವನಗೌಡ ನಾಯಕ ದೂರಿದರು. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಅದಕ್ಕಾಗಿ ನಾನು ಯೋಜನೆ ರೂಪಿಸಿದ್ದೇವೆ. ಲೋಕಸಭಾ ಚುನಾವಣೆಯ ಬಳಿಕ ಕುಮಾರಸ್ವಾಮಿ ಸರ್ಕಾರ ಪತನವಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲಿದೆ. ಅದು ಹೇಗೆ ಅನ್ನೋದನ್ನು ನಾನು ಹೇಳಲ್ಲ, ನೀವೇ ಕಾದು ನೋಡಿ. ವೈದ್ಯರು ಅಪರೇಶನ್ಅನ್ನು ಕೊಠಡಿಯಲ್ಲಿ ಮಾಡ್ತಾರೆ. ಹಾಗೇ ನಾವೂ ಕೂಡ ಯೋಜನೆ ರೂಪಿಸಿದ್ದೇವೆ. ಅದನ್ನು ಈಗ್ಲೇ ವಿವರಿಸಲ್ಲ ಎಂದು ಶಿವನಗೌಡ ನಾಯಕ್ ಮತ್ತೆ ಆಪರೇಷನ್ ಕಮಲದ ಸುಳಿವು ನೀಡಿದರು.