ರಾಯಚೂರು: ಜಿಲ್ಲಾದ್ಯಂತ ಕೊರೊನಾ ನಿಯಂತ್ರಿಸಿ, ಕೋವಿಡ್-19 ನಿರ್ವಹಣೆಗೆ ಮಾಡಿಕೊಂಡಿರುವ ಖರ್ಚಿನ ಬಾಬತ್ತಿಗೆ ಅನುದಾನ ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರು ಒತ್ತಾಯಿಸಿದರು.
ಲಿಂಗಸುಗೂರು ಸಹಾಯಕ ಆಯುಕ್ತ ರಾಜಶೇಖರ್ ಅವರಿಗೆ ಮನವಿ ಸಲ್ಲಿಸಿದ ನೌಕರರು, ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜನಜಾಗೃತಿ, ಬ್ಯಾನರ್ ಅಳವಡಿಕೆ, ರಾಸಾಯನಿಕ ಸಿಂಪಡಣೆಯಂತ ಹಲವು ಕಾರ್ಯಕ್ರಮ ನಡೆಸಿದ್ದೇವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬಂದ ವಲಸಿಗರಿಗೆ ಆರಂಭಿಸಿದ ಕ್ವಾರಂಟೈನ್ ನಿರ್ವಹಣೆಗೆ ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದು, ಆಡಳಿತ ವ್ಯವಸ್ಥೆ ಈ ಕಾರ್ಯಕ್ಕೆ ಅಗತ್ಯ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸಂಬಂಧಿ ಹಲವು ಕಾರ್ಯಕ್ರಮ, ಕ್ವಾರಂಟೈನ್ಗಳಿಗೆ ಅಗತ್ಯ ಸೌಲಭ್ಯ, ಊಟ, ಉಪಹಾರ ಇತರ ವ್ಯವಸ್ಥೆ ಮಾಡಿದ್ದೇವೆ. ತಮ್ಮ ಜೊತೆ ನಿಯೋಜಿಸಿದ್ದ ಇತರ ಇಲಾಖೆ ನೌಕರರು ಸ್ಪಂದಿಸದೇ ಹೋಗಿದ್ದರಿಂದ ನಿರೀಕ್ಷಿತ ಕೆಲಸ ಮಾಡಲಾಗಿಲ್ಲ. ಆದರೆ, ಜಿಲ್ಲಾದ್ಯಂತ ಕೆಲ ಇಲಾಖೆ ಅಧಿಕಾರಿಗಳು ಮತ್ತು ನೌಕರರು ಪಂಚಾಯತ್ ರಾಜ್ ಇಲಾಖೆ ನೌಕರ ಅಧಿಕಾರಿಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಅಪಮಾನಗೊಳಿಸುವುದನ್ನು ಖಂಡಿಸುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಣ್ಣಾರಾವ್ ನಾಯಕ, ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ ನಾಯಕ, ತಾಲೂಕು ಅಧ್ಯಕ್ಷೆ ಶೋಭಾರಾಣಿ ಇದ್ದರು.