ರಾಯಚೂರು: ಕೊರೊನಾ ವೈರಸ್ ಮನುಕುಲವನ್ನು ಕಾಡುತ್ತಿದ್ದರೆ, ಚರ್ಮಗಂಟು ರೋಗ ಪ್ರಾಣಿಗಳನ್ನು ಕಾಡಲಾಂಭಿಸಿದೆ. ಸೋಂಕಿನ ಮೇಲೆ ಸೋಂಕುಗಳು ಕಾಣಿಸಿಕೊಳ್ಳುತ್ತಿದ್ದು, ಜನರ ನಿದ್ದೆಗೆಡಿಸಿವೆ. ಎತ್ತು, ಎಮ್ಮೆ ಸೇರಿದಂತೆ ಇತರ ಪ್ರಾಣಿಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಚರ್ಮಗಂಟು ರೋಗದಿಂದ ರೈತ ಸಮೂದಾಯ ಚಿಂತೆಗೀಡಾಗಿದೆ.
![Kalyana Karnataka cattle affected by lumpy skin disease](https://etvbharatimages.akamaized.net/etvbharat/prod-images/kn-rcr-05-lumpy-skin-disease-vis1-7202440_06102020181950_0610f_1601988590_850.jpeg)
ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಭಾಗ ಈಗಾಗಲೇ ಕೊರೊನಾದಿಂದ ತತ್ತರಿಸಿದ್ದು, ಈ ನಡುವೆ ಇದೀಗ ದನ, ಎಮ್ಮೆ, ಆಕಳು, ಎತ್ತುಗಳಲ್ಲಿ ಚರ್ಮಗಂಟು (ಲಂಪಿ ಸ್ಕೀನ್ ಡಿಸೀಸ್) ಎಂಬ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದೆ. ಸೋಂಕಿಗೆ ತುತ್ತಾಗುತ್ತಿರುವ ಜಾನುವಾರುಗಳ ಸ್ಥಿತಿ ಕಂಡ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕ್ಯಾಪ್ರಿಫಾಕ್ಸ್ (ಫಾಕ್ಸ್ ವಿರೀಡೆ) ಎಂಬ ವೈರಣುವಿನಿಂದ ಈ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದ್ದು, ದನ, ಎಮ್ಮೆ ಜತೆಗೆ ಮಿಶ್ರತಳಿ ರಾಸುಗಳಲ್ಲಿ ಹಾಗೂ ಕರುಗಳಲ್ಲಿ ಈ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಲಂಪಿ ಸ್ಕೀನ್ ಡಿಸೀಸ್ ರಾಜ್ಯದ ಎಲ್ಲ ಕಡೆ ಹರಡಿದೆ. ಇದು ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ರಾಯಚೂರು ಜಿಲ್ಲೆಯೊಂದರಲ್ಲಿಯೇ 24 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಈ ವೈರಸ್ ಹರಡಿದೆ. ಪಶು ಜನಗಣತಿ ಆಧಾರದ ಮೇಲೆ ಜಿಲ್ಲೆಯ 2.45 ಲಕ್ಷ ದನಗಳು, 1.12 ಎಮ್ಮೆಗಳಾಗಿವೆ.
![Kalyana Karnataka cattle affected by lumpy skin disease](https://etvbharatimages.akamaized.net/etvbharat/prod-images/kn-rcr-05-lumpy-skin-disease-vis1-7202440_06102020181950_0610f_1601988590_642.jpeg)
ಈ ಜಾನುವಾರುಗಳಲ್ಲಿ ಈಗಾಗಲೇ 24 ಸಾವಿರ ಹೆಚ್ಚು ಲಂಪಿ ಸ್ಕೀನ್ ಡಿಸೀಸ್ ಕಂಡು ಬಂದಿದ್ದು, ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಪಶು ಇಲಾಖೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಕರುವೊಂದು ಮೃತಪಟ್ಟಿದೆ. ಜಿಲ್ಲೆಯ 107 ಪಶು ಚಿಕಿತ್ಸೆ ಕೇಂದ್ರಗಳಿದ್ದು, ಸಿಬ್ಬಂದಿ, ವೈದ್ಯರ ಕೊರತೆ ಇದೆ. ಇಂತಹ ಸಮಸ್ಯೆಗಳ ನಡುವೆ ಪಶುಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ರೈತರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಅಂತಾರೆ ಇಲ್ಲಿನ ಪಶು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಶಿವಣ್ಣ.
ಹಾಲು ಇಳುವರಿ ಕಡಿತ:
ಕೊರೊನಾ ವೈರಸ್ ದೇಶದ ಆರ್ಥಿಕತೆಯನ್ನ ಅಲುಗಾಡಿಸಿದರೆ, ಲಂಪಿ ಸ್ಕೀನ್ ಡಿಸೀಸ್ ಎಮ್ಮೆಗಳ ಹಾಲು ಇಳುವರಿ ಪ್ರಮಾಣವನ್ನು ಕುಗ್ಗಿಸುತ್ತೆ. ಕಾಯಿಲೆ ಹರಡಿದ ರಾಸುಗಳು ಕಡಿಮೆ ಪ್ರಮಾಣದ ಆಹಾರ ಸ್ವೀಕರಿಸುತ್ತವೆ. ಹೀಗಾಗಿ ಹಾಲಿನ ಇಳವರಿ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಪಶು ಇಲಾಖೆ ವೈದ್ಯರು.