ರಾಯಚೂರು : ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಗುರುವೈಭೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಉತ್ಸವದ ಕೊನೆಯ ದಿನವಾದ ಇಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೇ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಪುನಸ್ಕಾರಗಳು ನೇರವೇರಿದವು.
ರಾಯರ 428ನೇ ಜನ್ಮದಿನ : ರಾಯರ 428ನೇ ಹುಟ್ಟು ಹಬ್ಬವನ್ನು ವರ್ಧಂತಿ ಉತ್ಸವವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಶ್ರೀಮಠದ ಪೀಠಾಧಿಪತಿ ಶ್ರೀಸುಭುದೇಂಧ್ರ ತೀರ್ಥರು ಈ ವೇಳೆ ವಿಶೇಷ ಅಭಿಷೇಕವನ್ನು ನೇರವೇರಿಸಿದರು. ಇದಾದ ನಂತರ ತಿರುಪತಿ ತಿರುಮಲ ದೇವಾಲಯದ ಶ್ರೀನಿವಾಸ ದೇವರಿಂದ ಆಗಮಿಸಿದ ಶೇಷವಸ್ತ್ರವನ್ನು ಧಾರ್ಮಿಕ ಪದ್ಧತಿಯಂತೆ ಬರಮಾಡಿಕೊಂಡು, ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿಲಾಯಿತು.
ಅಭಿಷೇಕ ಹಾಗೂ ರಾಯರ ಮೂಲ ಬೃಂದಾವನ ಪೂಜೆಯ ಬಳಿಕ ಮಠದ ಪ್ರಾಕಾರದಲ್ಲಿ ನವರತ್ನ ಖಚಿತವಾದ ರಥವನ್ನು ಎಳೆಯಲಾಯಿತು. ರಥದ ಪಲ್ಲಕ್ಕಿಯಲ್ಲಿ ರಾಯರ ಮೂಲ ಬೃಂದಾವನದ ಮೂರ್ತಿ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ಸ್ವರ್ಣ ಮೂರ್ತಿಯನ್ನು ಇರಿಸಿ, ವ್ಯಾದ ಮೇಳ ಹಾಗೂ ಗಣ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು.
ಸಂಗೀತ ವಿದ್ವಾಂಸರಿಂದ ನಾದಹಾರ ಕಾರ್ಯಕ್ರಮ : ವರ್ಧಂತಿ ಉತ್ಸವ ಹಿನ್ನೆಲೆ ತಮಿಳುನಾಡು ಮೂಲದ ಸುಮಾರು 600 ಜನ ಸಂಗೀತ ವಿದ್ವಾಂಸರಿಂದ ನಾದಹಾರ ಕಾರ್ಯಕ್ರಮ ಜರುಗಿತು. ದೇವಾಲಯಕ್ಕೆ ಬಂದ ಭಕ್ತರು ನಾದಹಾರ ಕಾರ್ಯಕ್ರಮವನ್ನು ಭಕ್ತಿಪರವಶರಾಗಿ ವೀಕ್ಷಿಸಿದರು.
ಧರ್ಮದಲ್ಲಿ ರಾಜಕೀಯ ಬರಬಾರದು : ಈ ಕುರಿತು ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಮುಖ್ಯವಾಗಿ ನಾನು ಮೊದಲಿನಿಂದಲೂ ಹೇಳುತ್ತಾ ಬಂದಿರುವುದು ಇಂಥ ವ್ಯಕ್ತಿ ಬರಬೇಕು ಇಂಥ ಬರಬಾರ್ದು ಅನ್ನೋದಿಲ್ಲ. ಬಂದಂತ ವ್ಯಕ್ತಿಗಳು ರಾಜ್ಯದ ಜನತೆ ಬಗ್ಗೆ ಕಾಳಜಿ ಉಳ್ಳವರಾಗಿರಬೇಕು ಎಂದು ಅಭಿಪ್ರಾಯಪಟ್ಟರು. ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಸಂತರಿಗೆ ಸಿಎಂ ಸ್ಥಾನಮಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವಂತ ವ್ಯಕ್ತಿ ಆಯ್ಕೆ ಆಗಿ ಬರಬೇಕು. ಧರ್ಮದಲ್ಲಿ ರಾಜಕೀಯ ಬರಬಾರದು, ರಾಜಕೀಯದಲ್ಲಿ ಧರ್ಮ ಬಂದರೆ ಅದು ಉತ್ತಮವಾದ ಗುಣಮಟ್ಟದ ಆಡಳಿತ ವ್ಯವಸ್ಥೆ ಎಂದು ಭಾವಿಸುತ್ತೇನೆ ಎಂದರು.
ಇನ್ನು, ಗುರು ವೈಭೋತ್ಸವದ ಕೊನೆಯ ದಿನವಾದ ಇಂದು ರಾಯರ ದರ್ಶನ ಪಡೆದುಕೊಳ್ಳಲು ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ದೇಶದ ನಾನಾ ಕಡೆಗಳಿಂದ ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ. ಸಂಜೆಯ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ, ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಜೊತೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ : ಫೆಬ್ರವರಿ 21 ರಿಂದ 26ರ ವರೆಗೆ ರಾಯರ ಪಟ್ಟಾಭಿಷೇಕ, ವರ್ಧಂತಿ ಉತ್ಸವ