ರಾಯಚೂರು: ತುಂಗಭದ್ರಾ ನದಿ ತ್ರಿವಳಿ ಜಿಲ್ಲೆಯ ಪಾಲಿಗೆ ಜೀವನಾಡಿ. ಜಲಾಶಯ ನೀರನ್ನೇ ನಂಬಿಕೊಂಡು ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಆದ್ರೆ, ಜಲಾಯಶ ವ್ಯಾಪ್ತಿಗೆ ಬರುವಂತಹ ರೈತರಿಗೆ ನೀರು ತಲುಪದ ಹಿನ್ನೆಲೆ ಪರಿಹಾರ ಕಂಡುಕೊಳ್ಳುವುದಕ್ಕೆ ನೀರಾವರಿ ಇಲಾಖೆ ಕೋಟ್ಯಂತರ ರೂಪಾಯಿ ವ್ಯಯ ಮಾಡುವ ಮೂಲಕ ಭೌಗೋಳಿಕ ಸಮೀಕ್ಷೆಗೆ ಮುಂದಾಗಿದೆ.
ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬರುವ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಪಾಲಿಗೆ ಜೀವ ನದಿಯಾಗಿದ್ದು, ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕುತ್ತದೆ. ಆದ್ರೆ ಇತ್ತೀಚೆಗೆ ಅಕ್ರಮ ನೀರಾವರಿ ಮತ್ತು ನಾಲೆ ದುರಸ್ತಿಯಿಂದಾಗಿ ತುಂಗಭದ್ರಾ ಎಡದಂಡೆಯ (ಟಿಎಲ್ಬಿಸಿ) ಕೆಲ ಪ್ರದೇಶಕ್ಕೆ ನೀರು ಸಮರ್ಪಕವಾಗಿ ನೀರು ದೊರೆಯದೆ ರೈತರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ಹೀಗಾಗಿ ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬರುವ ನಾಲೆಗಳಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಭೌಗೋಳಿಕ ಸರ್ವೆ(Topographical Survey)ಗೆ ಚಿಂತನೆ ಮಾಡಿ, ನೀರಾವರಿ ನಿಗಮ 9.98 ಕೋಟಿ ರೂಪಾಯಿ ಮೊತ್ತದ ಟೆಂಡರ್(Tr.No-19859298) ಆಹ್ವಾನಿಸಿದೆ.
ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಗೆ ಬರುವಂತಹ ಮಾನ್ವಿ, ರಾಯಚೂರು ತಾಲೂಕಿನ ಕೆಳಭಾಗದ ರೈತರಿಗೆ ನೀರು ಸಲಹಾ ಸಮಿತಿಯಲ್ಲಿನ ನಿರ್ಧಾರಂತೆ ಕಾಲುವೆ ನೀರು ಹರಿಸಬೇಕು. ಆದ್ರೆ ನಿಗದಿತ ಪ್ರಮಾಣದಲ್ಲಿ ಕಾಲುವೆ ನೀರು ದೊರೆಯದ ಪರಿಣಾಮ ರೈತರ ಬೆಳೆಗೆ ಹಾನಿ ಉಂಟಾಗುತ್ತದೆ. ಈ ಹಾನಿ ತಪ್ಪಿಸಿಕೊಳ್ಳಲು ರೈತರು ಜಿಲ್ಲಾಡಳಿತಕ್ಕೆ ನೀರು ಒದಗಿಸುವಂತೆ ಪ್ರತಿಭಟನೆ, ರಸ್ತೆ ತಡೆ, ಸತ್ಯಾಗ್ರಹ ಸೇರಿದಂತೆ ನಾನಾ ರೀತಿಯಲ್ಲಿ ಹೋರಾಟ ನಡೆಸುವುದು ಪ್ರತಿ ವರ್ಷ ಅನಿವಾರ್ಯವಾಗಿದೆ.
ಇನ್ನು ಅಕ್ರಮ ನೀರಾವರಿಯನ್ನ ತಡೆಯದೆ ಅನಗತ್ಯವಾಗಿ ಕೋಟ್ಯಂತರ ರೂಪಾಯಿ ಹಣವನ್ನ ಭೌಗೋಳಿಕ ಸರ್ವೆಗೆ ವ್ಯಯ ಮಾಡಲು ಮುಂದಾಗಿರುವುದಕ್ಕೆ ರೈತ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.