ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಜೆಸ್ಕಾಂ ಉಪ ವಿಭಾಗಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕತ್ತಲಮಯವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕಳೆದು ಹದಿನೈದು ದಿನಗಳ ಹಿಂದೆ ಎಪಿಎಂಸಿ ಯಾರ್ಡ್ಗೆ ವಿದ್ಯುತ್ ಪೂರೈಸುವ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದ್ದು, ಜೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ಗಮನಕ್ಕೆ ತಂದರೂ ಸಹ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಎನ್ನಲಾಗಿದೆ.
ಎಪಿಎಂಸಿ ಆಡಳಿತ ಮಂಡಳಿ ಕೂಡ ಮಾರುಕಟ್ಟೆಗೆ ಬರುವ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮೌನ ವಹಿಸಿದೆ. ಕುಡಿವ ನೀರಿನ ಪೂರೈಕೆ ಇಲ್ಲದೆ ರೈತರು, ಜಾನುವಾರುಗಳು ಪರದಾಡುವಂತಾಗಿದೆ. ಜೊತೆಗೆ ವ್ಯಾಪಾರಸ್ಥರು ಅನೇಕ ರೀತಿಯ ಸಂಕಷ್ಟ ಎದುರಿಸುವಂತಾಗಿದೆ. ತುರ್ತಾಗಿ ದುರಸ್ತಿ ಮಾಡದೆ ಹೋದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ವರ್ತಕರು ಎಚ್ಚರಿಕೆ ನೀಡಿದ್ದಾರೆ.