ರಾಯಚೂರು : ಇಲ್ಲಿನ ನಗರಸಭೆ ಪೂರೈಕೆ ಮಾಡುವ ಅಶುದ್ಧ ನೀರಿನ ಪರಿಣಾಮದಿಂದ ಜನರು ಅನಾರೋಗ್ಯಕ್ಕೆ ಈಡಾಗಿದ್ದು, ಸಾವಿನ ಬಾಗಿಲಿನ ಕದವನ್ನು ತಟ್ಟುತ್ತಿದ್ದಾರೆ. ಇದರ ಬೆನ್ನಲ್ಲೆ ಮತ್ತೊಬ್ಬ ವ್ಯಕ್ತಿ ಕಲುಷಿತ ನೀರು ಪೂರೈಕೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ ಎನ್ನುವ ಆರೋಪ ಸಹ ಕೇಳಿಬಂದಿದೆ.
ನಗರದ ಅಂದ್ರೂನ್ ಕಿಲ್ಲಾ ನಿವಾಸಿ ಅಬ್ದುಲ್ ಗಫರ್ (35) ಮೃತಪಟ್ಟ ವ್ಯಕ್ತಿ. ಅಶುದ್ಧ ನೀರು ಕುಡಿದು ಅದೇ ಬಡಾವಣೆಯಲ್ಲಿ ಸುಮಾರು 20ಕ್ಕೂ ಅಧಿಕ ಜನ, ಹೊಟ್ಟೆ ನೋವು ವಾಂತಿ, ಭೇದಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ದಿನಗಳ ಹಿಂದೆ ಕಲುಷಿತ ನೀರು ಪೊರೈಕೆಯಿಂದ ಇಂದಿರಾ ನಗರದ ಏರಿಯಾದ 60ಕ್ಕೂ ಹೆಚ್ಚು ಜನರು ವಾಂತಿ, ಭೇದಿ, ನೀರ್ಜಲೀಕರಣ ಸಮಸ್ಯೆ ಸೇರಿದಂತೆ ನಾನಾ ರೋಗಗಳಿಗೆ ತುತ್ತಾಗಿದ್ದಾರೆ. ಇನ್ನು ಮಲ್ಲಮ್ಮ ಎನ್ನುವ ಮಹಿಳೆ ಇದೇ ಕಾರಣಕ್ಕೆ ಮೃತಪಟ್ಟಿದ್ದಾಳೆ ಎನ್ನುವ ಆರೋಪವಿದೆ. ಇದರ ಬೆನ್ನಲೆ ಮತ್ತೊಬ್ಬ ವ್ಯಕ್ತಿಯ ಮೃತಪಟ್ಟಿರುವುದು ನಗರದ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಅಂದ್ರೂನ್ ಕಿಲ್ಲಾ, ಇಂದಿರಾ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ವಾಸಿಸುವ ನೂರಾರು ಜನರು ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಗರಸಭೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯ ಎಂದು ಬಡವಣೆ ನಿವಾಸಿಗಳು, ಚುನಾಯಿತ ಪ್ರತಿನಿಧಿಗಳು ಆರೋಪಿಸುತ್ತಿದ್ದಾರೆ.
ಹೆಚ್ಚಿನ ಓದಿಗೆ: ರಾಯಚೂರಲ್ಲಿ ಕಲುಷಿತ ನೀರು ಕುಡಿದು 60ಕ್ಕೂ ಹೆಚ್ಚು ಜನ ಅಸ್ವಸ್ಥ!
ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ನಗರಸಭೆ ಪೌರಾಯುಕ್ತ ಗುರುಲಿಂಗಪ್ಪರನ್ನು ಸ್ಥಳೀಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಕಾರಣವಾದ ಅಧಿಕಾರಿಗಳ ಅಮಾನತುಗೊಳಿಸಬೇಕು, ಜನರಿಗೆ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಹಾಗೂ ಮೃತಪಟ್ಟವರಿಗೆ ತಲಾ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹೇಮಂತ್ ಸೋರನ್ ವಿರುದ್ಧದ ಪಿಐಎಲ್ ಅರ್ಜಿ ಸ್ವೀಕರಿಸಿದ ಜಾರ್ಖಂಡ್ ಹೈಕೋರ್ಟ್