ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ ) ವಿಷಯದಲ್ಲಿ ಕಮ್ಯೂನಿಕೇಷನ್ ಗ್ಯಾಪ್ ಆಗಿದೆ. ಕಾಯ್ದೆಯಿಂದ ಮುಸ್ಲಿಮರಿಗಾಗಿ ಆಗಲಿ ಅಥವಾ ಇನ್ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.
ಅವರಿಂದು ನಗರದ ಹೊರವಲಯದ ಸರ್ಕಿಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೌರತ್ವ ಕಾಯ್ದೆ ವಿಷಯದಲ್ಲಿ ಕುಳಿತು ಮಾತನಾಡಬೇಕಿದೆ. ಕಾಯ್ದೆಯಡಿ ಪಕ್ಕದ ದೇಶಗಳ ಹಿಂದೂಗಳಿಗೆ ಪೌರತ್ವ ನೀಡುವ ಉದ್ದೇಶವಿದ್ದು, ಇದಕ್ಕೆ ಯಾವುದಾದರೂ ಆಕ್ಷೇಪಗಳಿದ್ದರೆ ಚರ್ಚೆಗಳು ನಡೆಯಬೇಕು.
ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚೆಗಳಾಗಬೇಕು. ಸರ್ಕಾರ ಹಾಗೂ ಸಮುದಾಯಗಳು ಪರಸ್ಪರ ಚರ್ಚೆ ನಡೆಸುವ ಮೂಲಕ ಅಭಿಪ್ರಾಯ, ಪ್ರಶ್ನೆ ಹಾಗೂ ಗೊಂದಲಗಳು ನಿವಾರಣೆಯಾಗಬೇಕು. ದೇಶದ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಕಾಯ್ದೆಯಿಂದ ಯಾವುದೇ ಧರ್ಮ, ಸಮುದಾಯದವರಿಗೆ ಸಮಸ್ಯೆಯಾಗಬಾರದು ಎಂದರು.
ಮುಸ್ಲಿಮರಿಗೆ ಈ ಕಾಯ್ದೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಕಾಯ್ದೆಯಿಂದ ಯಾವುದೇ ಜಾತಿ ಧರ್ಮದ ಜನರಿಗೆ ತೊಂದರೆಯಾಗಿದ್ದಲ್ಲಿ, ಅವರ ಜೊತೆ ನಾವಿರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಆರ್ಟ್ ಆಫ್ ಲಿವಿಂಗ್ನ ವರ್ಷಾಚರಣೆಗೆ ಈಗಾಗಲೇ ಸಿದ್ಧತೆ ನಡೆದಿದೆ. ದೇಶಿಯ ತಳಿಯ ಬೀಜಗಳನ್ನು ಸಂರಕ್ಷಿತ ಬೇಕು. ಇದರಿಂದ ರೈತರು ಸ್ವಾವಲಂಬಿಗಳಾಗುತ್ತಾರೆ. ಅಯೋಧ್ಯಾ ಟ್ರಸ್ಟ್ ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲ ಎಂದ ಅವರು, ಮದ್ಯಪಾನ ನಿಷೇಧಕ್ಕೆ ಮಹಿಳೆಯರು ಹೋರಾಟ ಮಾಡುತ್ತಿದ್ದು , ಅದಕ್ಕೆ ನಾನು ಬೆಂಬಲಿಸುತ್ತೇನೆ ಎಂದರು.