ಮೈಸೂರು : ಪತ್ನಿಯ ಸಾವಿನ ನೋವು ಮರೆಯಲಾಗದೇ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪತಿ ಇಂದು ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದು, ಪೋಷಕರಿಬ್ಬರನ್ನೂ ಕಳೆದುಕೊಂಡ ಮುದ್ದು ಕಂದಮ್ಮಗಳು ಅನಾಥವಾದ ಘಟನೆ ನಗರದಲ್ಲಿ ನಡೆದಿದೆ. ತಾಲೂಕಿನ ಹಂಚ್ಯಾ ಗ್ರಾಮದ ಮಹೇಶ್(45) ಎಂಬುವರೆ ಆತ್ಮಹತ್ಯೆ ಮಾಡಿಕೊಂಡವರು. ಮೃತರು ಇಬ್ಬರೂ ಮಕ್ಕಳು ಹಾಗೂ ತಂದೆ-ತಾಯಿ, ಸಹೋದರರನ್ನು ಅಗಲಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ಮಹೇಶ್ ಪತ್ನಿ ಗಾಯಿತ್ರಿ ಬಿಪಿ ಮಾತ್ರೆಯ ಬದಲಾಗಿ ಬೇರೆ ಮಾತ್ರ ಸೇವಿಸಿ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಅಸು ನೀಗಿದ್ದರು. ಅಂದಿನಿಂದಲೂ ಮಾನಸಿಕವಾಗಿ ನೊಂದಿದ್ದ ಮಹೇಶ್, ಎರಡಕ್ಕೂ ಹೆಚ್ಚು ಬಾರಿ ಆತ್ಮಹತ್ಯೆ ಪ್ರಯತ್ನ ನಡೆಸಿದ್ದರಾದರೂ ಸ್ಥಳೀಯರು ಅವರನ್ನು ತಡೆದಿದ್ದರು.

ಆದರೆ, ಇಂದು ತೋಟವೊಂದರಲ್ಲಿ ಗಿಡಕ್ಕೆ ಹೊಡೆಯುವ ಕಾಳಿನ ಔಷಧಿಯನ್ನು ಸೇವಿಸಿದ್ದಾರೆ. ಬಳಿಕ ತಾನೇ ಸಹೋದರನಿಗೆ ಕರೆ ಮಾಡಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ತಾನು ಬದುಕಿರಲಾರೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆಂದು ಹೇಳಿದ್ದಾರೆ. ವಿಷಯ ತಿಳಿದು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಪ್ರಾಣ ತ್ಯಜಿಸಿದ್ದಾರೆ. ಮಹೇಶ್ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದು, ಮಕ್ಕಳು ಅನಾಥರಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಕೋರಮಂಗಲ ಪೊಲೀಸರಿಂದ ಭರ್ಜರಿ ಬೇಟೆ : 102 ಕೆಜಿ ಗಾಂಜಾ ಸಮೇತ 5 ಆರೋಪಿಗಳ ಬಂಧನ