ಮೈಸೂರು: ಕುಮಾರಸ್ವಾಮಿ ಅವರಿಗೆ ಚುನಾವಣೆ ಬಂದ್ರೆ ಮಾತ್ರ ಜನ ನೆನಪಾಗುತ್ತಾರೆ ಹಾಗೂ ಚುನಾವಣೆ ಸಂದರ್ಭದಲ್ಲೇ ಕಣ್ಣೀರು ಬರುತ್ತದೆ ಎಂದು ಸಚಿವ ಶ್ರೀರಾಮುಲು ಹೆಚ್ಡಿಕೆಗೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಯಾವೊಬ್ಬರಿಗೂ ಮಾನ ಇಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಹುಣಸೂರಿನಲ್ಲಿ ಪ್ರತಿಕ್ರಿಯಿಸಿದ ಶ್ರೀರಾಮುಲು, ಕುಮಾರಸ್ವಾಮಿ ಒಂಥರಾ ಹಿಟ್ ಅಂಡ್ ರನ್ ಮಾಡೋ ರಾಜಕಾರಣಿಯಲ್ಲಿ ಒಬ್ಬರು. ಚುನಾವಣೆ ಬಂದ್ರೆ ಮಾತ್ರ ಜನ ನೆನಪಾಗುತ್ತಾರೆ ಹಾಗೂ ಚುನಾವಣೆ ಸಂದರ್ಭದಲ್ಲೇ ಅವರಿಗೆ ಕಣ್ಣೀರು ಬರುತ್ತದೆ. ಚುನಾವಣೆ ಗೆದ್ದ ನಂತರ ಫೈವ್ ಸ್ಟಾರ್ ಹೋಟೆಲ್ನಲ್ಲಿ ಇರ್ತಾರೆ ಎಂದರು.
ಅಲ್ಲದೆ ಕಾವಿ ಧರಿಸುವವರ ಬಗ್ಗೆ ಅವರು ಮಾತನಾಡುವುದು ಸರಿಯಲ್ಲ. ಕಾವಿಯನ್ನು ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಸ್ವಾಮೀಜಿ, ಪೇಜಾವರ ಸ್ವಾಮೀಜಿ ಹಾಗೂ ವಾಲ್ಮೀಕಿ ಸ್ವಾಮೀಜಿ ಎಲ್ಲರೂ ಕಾವಿ ಧರಿಸುತ್ತಾರೆ. ಕಾವಿಗೆ ಅವಮಾನ ಮಾಡುವುದು ತಪ್ಪು , ಅವರೇ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಿಜೆಪಿ ರಾಜ್ಯದ 15 ಕ್ಷೇತ್ರದಲ್ಲಿ ಗೆಲ್ಲುತ್ತದೆ. ಇನ್ನೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಒಳ ಒಪ್ಪಂದ ಮಾಡಿಕೊಂಡಿದ್ದು , ಮತ್ತೆ ಸರ್ಕಾರ ರಚಿಸುವ ಕನಸು ಕಾಣುತ್ತಿದೆ, ಸ್ವಲ್ಪ ದಿನ ಕಳೆದರೆ ಸತ್ಯ ಗೊತ್ತಾಗುತ್ತದೆ, ಭ್ರಮೆ ದೂರ ಆಗುತ್ತದೆ ಎಂದರು.