ಮೈಸೂರು: ಸಮ್ಮಿಶ್ರ ಸರ್ಕಾರ ಕೆಡವಿದ ಹದಿನೇಳು ಮಂದಿಗೂ ನನಗೂ ಸಂಬಂಧ ಇಲ್ಲ, ನಾನೇ ಬೇರೆ ಅವರೇ ಬೇರೆ. ಅವರ ಜೊತೆ ನಾನು ಗುರುತಿಸಿಕೊಂಡಿಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಸ್ಪಷ್ಟಪಡಿಸಿದರು.
ಸಮ್ಮಿಶ್ರ ಸರ್ಕಾರ ಕೆಡವುದರಲ್ಲಿ ನನ್ನ ಪಾತ್ರವಿಲ್ಲ. ಯಡಿಯೂರಪ್ಪ ಸರ್ಕಾರ ರಚನೆಯಾಗಲೂ ನನ್ನ ಪಾತ್ರ ಇಲ್ಲ. ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡಿದಾಗ ನಾನು ಆಬ್ಸೆಂಟ್ ಆಗಿದ್ದೆ. ಹಾಗಾಗಿ ಸರ್ಕಾರ ಬೀಳಿಸುವಲ್ಲಿ ಹಾಗೂ ರಚನೆ ಮಾಡುವಲ್ಲಿ ನನ್ನ ಪಾತ್ರವಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ವಿಶ್ವಾಸದಲ್ಲಿದ್ದೀನಿ. ನಾನು ಸದ್ಯಕ್ಕೆ ಯಾವ ಪಕ್ಷ ಸೇರುವ ಬಗ್ಗೆಯೂ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದರು.
ಕೆಆರ್ಎಸ್ ಅಣೆಕಟ್ಟು ಬಿರುಕು ವಿವಾದ ವಿಚಾರವಾಗಿ ಮಾತನಾಡಿ, KRS ಆಣೆಕಟ್ಟೆ ಬಿರುಕು ಬಿಟ್ಟಿದೆ ಅನ್ನೋದು ಸೂಕ್ಷ್ಮ ವಿಚಾರ. ಸರ್ಕಾರದ ತಜ್ಞರು ಈ ಬಗ್ಗೆ ಪರೀಕ್ಷೆ ನಡೆಸಬೇಕು. ಜಲಸಂಪನ್ಮೂಲ ಇಲಾಖೆ ಇದೆ, ನೀರಾವರಿ ತಜ್ಞರಿದ್ದಾರೆ ಅವರು ನೋಡಿಕೊಳ್ತಾರೆ. ತಜ್ಞರು ಕೂಡಾ ಯಾವುದೇ ಬಿರುಕಿಲ್ಲ ಅಂತ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ರಾಜಕೀಯವಾಗಿ ಮಾತನಾಡಬಾರದು ಎಂದರು.
ಅಣೆಕಟ್ಟು ವಿವಾದದಲ್ಲಿ ಅಂಬರೀಶ್ ಸಾವಿನ ಪ್ರಸ್ತಾಪ ವಿಚಾರವಾಗಿ ಮಾತನಾಡಿ, 'ದಟ್ ಇಸ್ ವೆರಿ ಅನ್ ಫಾರ್ಚುನೆಟ್' ಅಂಬರೀಶ್ ಯಾವ ಪಕ್ಷದಲ್ಲಿದ್ರೂ ಎಲ್ಲರ ಜೊತೆ ಚೆನ್ನಾಗಿದ್ರು. ಅವರ ಹೆಸರನ್ನು ಮಧ್ಯೆ ತಂದು ರಾಜಕಾರಣ ಮಾಡಬಾರದು ಎಂದು ಹೇಳಿದರು.
ಇನ್ನು ಕೇಂದ್ರ ಸಂಪುಟ ಪುನರಾಚನೆಯಲ್ಲಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ ಎಂದು ಬಿಜೆಪಿ ಪರ ಬ್ಯಾಟಿಂಗ್ ಮಾಡಿದರು.