ಮೈಸೂರು: ಕಬಿನಿ ಜಲಾಶಯಕ್ಕೆ ಕೇಂದ್ರ ಜಲ ತಂಡ ಭೇಟಿ ನೀಡಿ ಜಲಾಶಯದ ನೀರಿನ ಮಟ್ಟದ ಕುರಿತು ಪರಿಶೀಲನೆ ನಡೆಸಿತು.
ರಾಜ್ಯದಲ್ಲೇ ಮೊದಲು ತುಂಬುವ ಹಾಗೂ ವರ್ಷದಲ್ಲೇ 2 ಬಾರಿ ತುಂಬುವ ಖ್ಯಾತಿ ಪಡೆದಿರುವ ಕಬಿನಿ ಜಲಾಶಯ, ಈ ಬಾರಿ ಕೇರಳದ ವಯನಾಡಿನಲ್ಲಿ ಮಳೆ ಅಭಾವದ ಹಿನ್ನೆಲೆಯಲ್ಲಿ ಭರ್ತಿಯಾಗಿಲ್ಲ. ಜಲಾಶಯದಲ್ಲಿ ಪ್ರಸ್ತುತ 54 ಅಡಿ ಮಾತ್ರ ನೀರಿದೆ. ಈ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಪ್ರತಿ ವರ್ಷ ಜೂನ್ ತಿಂಗಳಲ್ಲಿ ಜಲಾಶಯ ತುಂಬುತ್ತಿತ್ತು.
ಆದರೆ, ಈ ಬಾರಿ ಜಲಾಶಯ ಇನ್ನೂ ಭರ್ತಿಯಾಗಿಲ್ಲ, ಈ ನಡುವೆ ಜಲಾಶಯದ ನೀರಿನ ಮಟ್ಟವನ್ನು ಹಾಗೂ ಇದರ ನಿರ್ವಹಣೆಯನ್ನು ಪರಿಶೀಲನೆ ಮಾಡಲು ಖುದ್ದು ಕೇಂದ್ರ ಜಲ ಮಂಡಳಿಯ ಸದಸ್ಯರು ಡ್ಯಾಂಗೆ ಕಳೆದ ವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗೇಟ್ಗಳಿಗೆ ಡಿಜಿಟಲ್ ಮೀಟರ್ ಅಳವಡಿಸುವಂತೆ ತಿಳಿಸಿದ್ದರು.
ರೈತರ ಆರೋಪ:
ಕಬಿನಿ ಜಲಾಶಯದಿಂದ ಈ ಬಾರಿ 1 ಬೆಳೆಗೆ ಮಾತ್ರ ನೀರು ಹರಿಸಿದ್ದು, ಉಳಿದ ನೀರನ್ನು ರಾತ್ರೋರಾತ್ರಿ ಕದ್ದುಮುಚ್ಚಿ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹರಿಸುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಕೂಡಲೇ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.