ಮೈಸೂರು: ಸಾಲದವರ ಕಿರುಕುಳ ತಾಳಲಾರದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಮಹದೇವ ನಗರದಲ್ಲಿ ನಡೆದಿದೆ.
ಹೀಗೆ ಆತ್ಮಹತ್ಯೆಗೆ ಯತ್ನಿಸಿದ ರೈತ ಮಾರಪ್ಪ (30). ಈತ ಮಹದೇವ ನಗರದ ನಿವಾಸಿಯಾಗಿದ್ದು , ನಂಜನಗೂಡು ಹಾಗೂ ಹೆಚ್.ಡಿ.ಕೋಟೆಯ ಸಂಘಗಳಲ್ಲಿ 40 ಸಾವಿರ ಸಾಲ ಪಡೆದುಕೊಂಡಿದ್ದು, ತನ್ನ ಜಮೀನಿನಲ್ಲಿ ಹತ್ತಿ, ರಾಗಿ ಮತ್ತು ಜೋಳವನ್ನು ಬೆಳೆದಿದ್ದನು. ಬೆಳೆ ಕೈಗೆ ಬರುವಷ್ಟರಲ್ಲಿ ಆನೆ ದಾಳಿಯಿಂದ ಬೆಳೆ ನಾಶವಾಗಿದೆ. ಈ ಸಂದರ್ಭದಲ್ಲಿ ಸಾಲ ವಾಪಸ್ ನೀಡುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮಾರಪ್ಪನನ್ನು ಪೀಡಿಸುತ್ತಿದ್ದರು. ಹೀಗಾಗಿ ಕಿರುಕುಳಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದು, ಈಗ ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಈತನ ತಾಯಿ ಸರೋಜಮ್ಮ ನನ್ನ ಮಗನಿಗೆ ಸಾಲ ಜಾಸ್ತಿಯಾಗಿತ್ತು, ಬೆಳೆಯನ್ನು ಆನೆಗಳು ತಿಂದುಬಿಟ್ಟಿತ್ತು, ಸಂಘಕ್ಕೆ ಕಟ್ಟಲು ನನ್ನ ಮಗನ ಬಳಿ ದುಡ್ಡು ಇರಲಿಲ್ಲ, ಫೈನಾನ್ಸ್ ಸಿಬ್ಬಂದಿ ಮನೆ ಹತ್ತಿರ ಬಂದು ಗಲಾಟೆ ಮಾಡಿದರು. ಬೇರೆ ಎಲ್ಲೂ ನಿಮಗೆ ಸಾಲ ಸಿಗದ ಹಾಗೆ ಮಾಡುತ್ತೇವೆ ಎಂದಿದ್ದಾರೆ. ನನ್ನ ಮಗ ಇವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದಾನೆ ಎಂದರು.