ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಕೋಮನಹಳ್ಳಿಯ ರೈತ ಮಂಜೇಗೌಡರು ತಯಾರಿಸಿರುವ ರೋಬೋ ರಸ್ತೆಗಳಲ್ಲಿ ಔಷಧ ಸಿಂಪಡಣೆಗೆ ಸಹಕಾರಿಯಾಗಿದೆ.
ಈ ರೋಬೋಗೆ ಔಷಧ ತುಂಬಿ ಸ್ಟಾರ್ಟ್ ಮಾಡಿದರೆ ಸಾಕು, ತನ್ನಿಂದ ತಾನೇ ರಸ್ತೆಗಳಲ್ಲಿ ಸಿಂಪಡಣೆ ಮಾಡಿ ಕೆಲಸ ಮುಗಿಸಲಿದೆ. ಇನ್ನು ಈಗಾಗಲೇ ಎಲ್ಲೆಡೆ ಕೊರೊನಾ ಹರಡುವಿಕೆ ಭೀತಿ ಇರುವುದರಿಂದ ರಸ್ತೆಗಳಲ್ಲಿ ಔಷಧ ಸಿಂಪಡಿಸುವ ಕಾರ್ಯ ಕೂಡ ಈ ರೋಬೋ ಮೂಲಕ ಸಾಗಿದೆ. ಇದನ್ನು ಗಮನಿಸಿರುವ ಅಧಿಕಾರಿಗಳು ತಮ್ಮ ಗ್ರಾಮಗಳಿಗೂ ಔಷಧ ಸಿಂಪಡಣೆಗಾಗಿ ಈ ರೋಬೋ ಕಳುಹಿಸುವಂತೆ ರೋಬೋ ಮಂಜೇಗೌಡರಿಗೆ ಮನವಿ ಮಾಡಿದ್ದಾರೆ. ಸದ್ಯ ಮಂಜೇಗೌಡರು ಉಚಿತವಾಗಿ ಸೇವೆ ಮಾಡುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ಸ್ಯಾನಿಟೈಸರ್ ಸೇರಿದಂತೆ ಔಷಧ ಸಿಂಪಡಣೆ ಮಾಡುತ್ತಿದ್ದಾರೆ.
ಗೂಡ್ಸ್ ಆಟೋಗೆ ರೋಬೋವನ್ನು ಜೋಡಿಸಿಕೊಂಡು ಸಿಂಪಡಣೆ ಕಾರ್ಯ ಶುರು ಮಾಡಿದ್ದಾರೆ. ಯಾವುದೇ ಗ್ರಾಮಸ್ಥರು ಮನವಿ ಮಾಡಿದರೆ ಉಚಿತವಾಗಿ ಸೇವೆ ಸಲ್ಲಿಸಲು ಮುಂದಾಗುತ್ತಾರೆ ಇವರು. ಇವರ ಈ ರೋಬೋ ಎಲ್ಲರ ಗಮನ ಸೆಳೆಯುತ್ತಿದೆ. ಕೆಲವು ಅಧಿಕಾರಿಗಳು ಇದರ ಸೇವೆ ಬಳಸಿಕೊಳ್ಳಲು ಮುಂದೆ ಬಂದಿದ್ದಾರೆ. ಮಂಜೇಗೌಡರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.