ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿರುವ ಮನೆಯ ಬೀಗ ಒಡೆದು ಕಳ್ಳರು ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಗ್ರಾಮದ ಲೋಲಾಕ್ಷಿ ಎಂಬುವರ ಮನೆಯಲ್ಲಿ ಕೃತ್ಯ ನಡೆದಿದೆ. ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವರ: ಲೋಲಾಕ್ಷಿ ನಿನ್ನೆ ಸಂಜೆ ಮದ್ದೂರು ಪಟ್ಟಣಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿದ್ದಾರೆ. ಬೀರುವಿನಲ್ಲಿದ್ದ ಅರ್ಧ ಕೆ.ಜಿ ಚಿನ್ನ ಹಾಗೂ ಒಂದು ಕೆ.ಜಿ ಬೆಳ್ಳಿ ಸೇರಿದಂತೆ ಅಂದಾಜು 40 ಲಕ್ಷ ರೂಪಾಯಿ ಬೆಲೆಬಾಳುವ ಸಾಮಗ್ರಿ ಹೊತ್ತೊಯ್ದಿದ್ದಾರೆ. ಈ ಮನೆಯಲ್ಲಿ ಲೋಲಾಕ್ಷಿ ಒಬ್ಬರೇ ವಾಸವಿದ್ದರಂತೆ. ಬೆಂಗಳೂರು-ಮೈಸೂರು ಹೆದ್ದಾರಿ ಸಮೀಪವಿರುವ ಈ ಮನೆಯಲ್ಲಿ ಕಳ್ಳತನ ನಡೆದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಲಾಗಿದೆ.
ಮಳವಳ್ಳಿಯಲ್ಲಿ ಮಹಿಳೆಯ ಶವ: ಮಳವಳ್ಳಿ ತಾಲ್ಲೂಕಿನ ನಿಡಘಟ್ಟ ಗೇಟ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ದಿವ್ಯಾಂಗ ಮಹಿಳೆಯ ಶವ ಪತ್ತೆಯಾಗಿದೆ. ತಾಲೂಕಿನ ಕ್ಯಾತೇಗೌಡನ ದೊಡ್ಡಿ ನಿವಾಸಿ ಪೂಜಾಬಾಯಿ (27) ಮೃತರು. ನಿನ್ನೆ ಇವರು ಗಂಡನ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದರಂತೆ. ಇಂದು ಕಾಂತರಾಜು ಎಂಬುವರ ಜಮೀನಿನಲ್ಲಿ ಶವ ದೊರೆತಿದೆ.
ಮಹಿಳೆಯ ನಿಗೂಢ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಕಾಲೇಜು ಬಾತ್ರೂಂನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ