ಕುಷ್ಟಗಿ (ಕೊಪ್ಪಳ): ತಾಲೂಕಿನಲ್ಲಿ ಬಹುತೇಕವಾಗಿ ಶವ ಸಂಸ್ಕಾರಕ್ಕೆ ಸೂಕ್ತ ಸ್ಥಳಾವಕಾಶವಿಲ್ಲ. ಶವ ಸಂಸ್ಕಾರ ಎನ್ನುವುದು ದೊಡ್ಡ ಸಮಸ್ಯೆಯಾಗಿದೆ. ಆದರೆ ತಾಲೂಕಿನ ಮೋಚಿಗಾರ (ಸಮಗಾರ) ಸಮಾಜದ ಹೆಸರಿನಲ್ಲಿ 1 ಎಕರೆ ರುದ್ರಭೂಮಿ ಇದ್ದರೂ ಹೂಳಲು ಜಾಗವಿಲ್ಲ. ಶವ ಸಂಸ್ಕಾರಕ್ಕೆ ಪಟ್ಟಣದ ಚರಂಡಿ ನೀರು ಅಡ್ಡಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಪಟ್ಟಣದಲ್ಲಿರುವ ಚರಂಡಿ ನೀರೆಲ್ಲಾ ಈ ಮೋಚಿಗಾರ ಸಮಾಜದ ಸ್ಮಶಾನ ಭೂಮಿಯನ್ನು ಗೇಣು ಜಾಗ ಬಿಡದೆ ಹೊಕ್ಕಿದೆ. ರಾಜಕಾಲುವೆಯಲ್ಲಿ ಆಪು ಹುಲ್ಲು, ಮುಳ್ಳು ಕಂಟಿ ಬೆಳೆದಿದ್ದು, ಚರಂಡಿ ನೀರಿನೊಂದಿಗೆ ಬರುವ ಪ್ಲಾಸ್ಟಿಕ್ ತ್ಯಾಜ್ಯ ಈ ಸ್ಮಶಾನ ಭೂಮಿಯನ್ನು ಆವರಿಸಿದೆ. ಇಡೀ ಎಕರೆ ಪ್ರದೇಶ ಚರಂಡಿ ನೀರು ತ್ಯಾಜ್ಯದ ಹೂಳಿನಿಂದ ತುಂಬಿದ್ದು, ಈ ನೀರು ಮುಂದೆ ಹರಿದರೆ ಮಾತ್ರ ಶವ ಸಂಸ್ಕಾರಕ್ಕೆ ಜಾಗ ಸಿಗಲಿದೆ. ಈ ಕುರಿತು ಪುರಸಭೆಯವರ ಗಮನಕ್ಕೆ ತಂದರೂ ಪ್ರಯೋಜನೆಯಾಗಿಲ್ಲ ಎನ್ನಲಾಗಿದೆ.
ಗೆಜ್ಜೆಭಾವಿ ಶ್ರೀಗಳು ನೀಡಿದ ಭೂಮಿ: ಕುಷ್ಟಗಿ ಪಟ್ಟಣದ ಹೊರವಲಯದ ಹಳೇ ನಿಡಶೇಸಿ ರಸ್ತೆಯಲ್ಲಿರುವ ಮೋಚಿಗಾರ ಸಮಾಜಕ್ಕೆ ಸೇರಿದ ಸ.ನಂ. 200ರ ಜಮೀನು 1 ಎಕರೆ ವಿಸ್ತೀರ್ಣ ಹೊಂದಿದೆ. ಈ ಸಮಾಜದ ರುದ್ರಭೂಮಿಗಾಗಿ ಮೋಚಿಗೇರಾ ಸಮುದಾಯದ ಹಿರಿಯ ಮುಖಂಡ ಸಹದೇವಪ್ಪ ಅಬ್ಬಿಗೇರಿ ಅವರ ಅವಿರತ ಪ್ರಯತ್ನದಿಂದಾಗಿ ಹಿಂದಿನ ನಿಡಶೇಸಿ ಪಶ್ಚಕಂಥಿ ಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಗೆಜ್ಜೆಭಾವಿ ಶ್ರೀಗಳು, ಮಠದ ನಂಬಿಗಸ್ಥ ಭಕ್ತರಾಗಿದ್ದ ಸಹದೇವಪ್ಪ ಅಬ್ಬಿಗೇರಿ ಅವರ ಮೋಚಿಗೇರಾ ಸಮಾಜಕ್ಕೆ 1996-97ರಲ್ಲಿ 1 ಎಕರೆ ಭೂಮಿಯನ್ನು ದಾನದ ರೂಪದಲ್ಲಿ ನೀಡಿದ್ದರು.
ಈ ರುದ್ರಭೂಮಿಗಾಗಿ ಸಹದೇವಪ್ಪ ಅಬ್ಬಿಗೇರಿ ಅವರು ಪುರಸಭೆಯ ಅನುದಾನದಿಂದ ರುದ್ರಭೂಮಿಗೆ ಎರಡು ಬದಿ ಕಾಂಪೌಂಡ್ ಗೋಡೆ, ಕೊಳವೆ ಬಾವಿ ಹಾಕಿಸಿದ್ದರು. ಈ ಸ್ಮಶಾನ ಭೂಮಿ ದಾರಿಗೆ ವಿದ್ಯುದ್ದೀಪ ಕಂಬಗಳನ್ನು ಅಳವಡಿಸಿ, ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಈ ಕುರಿತು ಮಾತನಾಡಿದ ಮೋಚಿಗಾರ ಸಮಾಜದ ಯುವ ಮುಖಂಡ ಮಂಜುನಾಥ ಅಬ್ಬಿಗೇರಿ, ನಮ್ಮ ಸಮಾಜಕ್ಕೆ ಪ್ರತ್ಯೇಕ ರುದ್ರಭೂಮಿ ಹೊಂದುವ ನಮ್ಮ ತಂದೆಯವರ ಆಶಯಕ್ಕೆ ನಿಡಶೇಸಿಯ ಗೆಜ್ಜಿಭಾವಿ ಶ್ರೀಗಳು 1 ಎಕರೆ ಜಮೀನು ನೀಡಿ ಸ್ಪಂದಿಸಿದ್ದರು. ಆದರೆ ಚರಂಡಿ ನೀರು ಸ್ಮಶಾನ ಭೂಮಿ ಆವರಿಸಿದೆ. ದಿನ ಬೆಳಗಾದರೆ ಯಾರದರು ಮೃತರಾದರೆ ಹೂಳಲು ಜಾಗ ಇಲ್ಲ. ಆದಷ್ಟು ಪುರಸಭೆ ತುರ್ತಾಗಿ ಸ್ಮಶಾನ ಭೂಮಿ ಆವರಿಸಿರುವ ಚರಂಡಿ ನೀರು, ಆಪು ಹುಲ್ಲು, ಮುಳ್ಳು ಕಂಟಿ ತೆರವುಗೊಳಿಸಬೇಕಿದೆ ಎಂದರು.