ಗಂಗಾವತಿ: ಮಳೆಯಾಶ್ರಿತ ಪ್ರದೇಶವಾದ ಕನಕಗಿರಿ ತಾಲ್ಲೂಕಿನಲ್ಲಿ ಬೆಳೆದ ಪಪ್ಪಾಯಿ ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೂ ಕಾಲಿಟ್ಟಿದೆ.
ಕನಕಗಿರಿ ಹೋಬಳಿಯ ಹಿರೇಖ್ಯಾಡ ಗ್ರಾಮ ಪಂಚಾಯಿತಿಯ ಬೊಮಚಿಹಾಳ ಗ್ರಾಮದ ದೇವಮ್ಮ ಎಂಬ ರೈತ ಮಹಿಳೆ ತನ್ನ 1.60 ಹೆಕ್ಟೇರು ಪ್ರದೇಶದಲ್ಲಿ ಪಪ್ಪಾಯಿ ಬೆಳೆ ಬೆಳೆದು ಇದೀಗ 20 ಟನ್ ಇಳುವರಿ ಪಡೆದು ಗಮನ ಸೆಳೆದಿದ್ದಾರೆ. ಕಳೆದ 2019-20 ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಕೃಷಿ ಭೂಮಿಯನ್ನು ವಿಸ್ತರಿಸಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಪಪ್ಪಾಯಿ ಬೆಳೆದಿದ್ದ ಈ ರೈತ ಮಹಿಳೆ ಇದುವರೆಗೆ ಎರಡು ಬಾರಿ ಇಳುವರಿ ಪಡೆದಿದ್ದಾರೆ.
ಮೊದಲ ಹಂತದ ಕಟಾವಿನಲ್ಲಿ 1.20 ಲಕ್ಷ ಆದಾಯ ಗಳಿಸಿದ್ದರು. ಇದೀಗ 2 ನೇ ಹಂತದಲ್ಲಿ 1.80 ಲಕ್ಷ ರೂ. ಆದಾಯ ಗಳಿಸಿದ್ದಾರೆ. ರೈತ ಮಹಿಳೆ ಬೆಳೆದ ಬೆಳೆಯನ್ನು ಕುಂದಾಪುರ, ದೆಹಲಿ, ಬೆಂಗಳೂರಿಗೆ ಸಾಗಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಯೋಗಿ ತಿಳಿಸಿದ್ದಾರೆ.