ಗಂಗಾವತಿ : ಅವ ಕಳ್ಳ ಇಂಜಿನಿಯರ್, ಕೆಲಸಕ್ಕೆ ಬಾರದವ, ಕೂಡಲೇ ಅವನನ್ನು ಕೆಲಸದಿಂದ ಕಿತ್ತು ಒಗಿಯಿರಿ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ನೀರಾವರಿ ಇಲಾಖೆಯ ಇಂಜಿನೀಯರ್ ಒಬ್ಬರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ತಾಲೂಕಿನ ಕೇಸಕ್ಕಿಹಂಚಿನಾಳ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಗೆ ಬೋಂಗಾ ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿದ ಶಿವರಾಜ ತಂಗಡಗಿ, ಅಲ್ಲಿದ್ದ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ದುರಸ್ತಿ ಕಾಮಗಾರಿಯ ಪ್ರಗತಿ ಬಗ್ಗೆ ಚರ್ಚಿಸಿದರು.
ಬಳಿಕ ಈ ಬಗ್ಗೆ ಮಾತನಾಡಿದ ಶಿವರಾಜ ತಂಗಡಗಿ, ರೈತರ ಸಮಸ್ಯೆಗೆ ಸ್ಪಂದಿಸದ ಕಾರಟಗಿಯ ನಂಬರ್ 31ರ ಕಾಲುವೆಯ ಇಂಜಿನಿಯರ್ ಸೂಗಪ್ಪ ಅದೋ ಅಲ್ಲಿದ್ದಾನೆ. ಅವನನ್ನು ಕೆಲಸದಿಂದ ಕಿತ್ತು ಒಗಿಯಿರಿ ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಅವ ನಿಮ್ಮ (ಅವಧಿಯಲ್ಲಿ ನಿಯೋಜಿತವಾದ) ಇಂಜಿನೀಯರ್' ಎಂದು ಮಾಜಿ ಸಚಿವರನ್ನು ಕೆಣಕಲು ಯತ್ನಿಸಿದರು. ಇದರಿಂದ ಮತ್ತಷ್ಟು ಅಸಮಾಧಾನಗೊಂಡ ತಂಗಡಗಿ, ಅವ ಯಾರಾದರೇನು...? ಇವಾಗ ಸರ್ಕಾರ ನಿಂದೈತಲ್ಲ ಅವನನ್ನ ತಕ್ಷಣ ಕಿತ್ತು ಒಗಿ.
ಅವ ನನ್ನ ಇಂಜಿನಿಯರ್. ಈಗ ನಿನಗೆ ಅಧಿಕಾರ ಇದೆ. ಸರ್ಕಾರ ನಿಂದೈತಿ ತೆಗೆದು ಒಗಿ ನೋಡೋಣ. ಇಲ್ಲಿ ಒಪನ್ ಆಗಿ ಹೇಳ್ತೇನೆ. ಇದರಲ್ಲಿ ಯಾವ ಮುಲಾಜಿಲ್ಲ. ಅವನನ್ನು ತೆಗೆದು ಒಗಿ ಎಂದು ನೀರಾವರಿ ಇಲಾಖೆಯ ಅಧಿಕಾರಿ ಸೂಗಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.