ಗಂಗಾವತಿ : ಕೊರೊನಾದ ಲಾಕ್ಡೌನ್ಗೆ ಸಿಲುಕಿದ ಈ ಕುಟುಂಬ ಅಕ್ಷರಶಃ ಇದೀಗ ಬಡತನದ ಬೇಗೆಯಲ್ಲಿ ಬೇಯುತ್ತಿದೆ. ಐವರು ಸದಸ್ಯರಿರುವ ಈ ಕುಟುಂಬ ಈಗ ನಿತ್ಯದ ಊಟಕ್ಕೂ ಪರದಾಡುತ್ತಿದೆ.
ನಗರದ ಈದ್ಗಾ ಮೈದಾನದ ಹಿಂದಿರುವ ಈಶ್ವರಸಿಂಗ್ ಎಂಬುವವರ ಕುಟುಂಬ ಇದೀಗ ಹೊತ್ತಿನ ಊಟಕ್ಕೂ ಹೋರಾಟ ಮಾಡಬೇಕಾದ ದಯನೀಯ ಸ್ಥಿತಿ ಎದುರಿಸುತ್ತಿದೆ. ಮನೆಯ ಮಾಲಿಕ ಈಶ್ವರ ಸಿಂಗ್ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ ಮಾಡುತ್ತಿದ್ದ ಸ್ಟೇಷನರಿ ವ್ಯಾಪಾರ ಐದಾರು ವರ್ಷದಿಂದ ಸ್ಥಗಿತ ಮಾಡಿದ್ದಾರೆ. ಅತ್ತೆ ಈರಮ್ಮ ಬಿಪಿ, ಶುಗರ್, ದೊಡ್ಡ ಮಗಳು ಕೊಮಲಾ ಹೈ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನೊಬ್ಬ ಮಗಳು ವಿಕಲಚೇತನೆ. ಇಷ್ಟೂ ಜನರಿಗೆ ಮಾಸಿಕವಾಗಿ ಔಷಧಿಗೆ ಅಂತಲೇ ಆರೆಂಟು ಸಾವಿರ ರೂಪಾಯಿ ಖರ್ಚಾಗುತ್ತಿದೆ. ಆದರೆ, ಊಟಕ್ಕೂ ಪರದಾಡುತ್ತಿರುವ ಈ ಕುಟುಂಬಕ್ಕೆ ಆರೋಗ್ಯ ಇದೀಗ ದೊಡ್ಡ ಸವಾಲಾಗಿ ಪರಿಣಾಮಿಸಿದೆ.
ಇರುವ ಮನೆಯ ಬಾಡಿಗೆಯನ್ನು ಕಳೆದ ಮೂರು ತಿಂಗಳಿಂದ ಕಟ್ಟಿಲ್ಲ. ಅಲ್ಲದೇ, ಲಾಕ್ಡೌನ್ ಮಕ್ಕಳ ಕೆಲಸವನ್ನು ಕಸಿದಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಯಾರಾದರೂ ದಾನಿಗಳಿದ್ದರೆ ನೆರವಿನ ಹಸ್ತ ಚಾಚುವಂತೆ ಸರಸ್ವತಿ ಬಾಯಿ ಮನವಿ ಮಾಡಿದ್ದಾರೆ. ಇವರ ಸಂಪರ್ಕ ಸಂಖ್ಯೆ ಕೋಮಲ - 7019803932.