ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಉಲ್ಬಣಿಸಿರುವ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗಾಗಿ ಜಿಲ್ಲೆಯ ನೂರಾರು ಹೃದಯಗಳು ಮಿಡಿದಿವೆ. ಸೇಡಂನಲ್ಲಿ ಪೊಲೀಸರು, ಪತ್ರಕರ್ತರು ಮತ್ತು ಸಾರ್ವಜನಿಕರು ಒಂದಾಗಿ ಪರಿಹಾರ ನಿಧಿ ಸಂಗ್ರಹಿಸಿ ಸಂತ್ರಸ್ತರಿಗೆ ನೆರವಿಗೆ ಧಾವಿಸಿದ್ದಾರೆ.
ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಶಿವು ನಿಡಗುಂದಾ ಅವರ ಮುಂದಾಳತ್ವದಲ್ಲಿ ಯುವಕರ ಗುಂಪು ಪರಿಹಾರ ನಿಧಿ ಸಂಗ್ರಹಿಸಿದರು. ಇನ್ನು ನಿಧಿ ಸಂಗ್ರಹಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸಹಾಯ ಹಸ್ತದ ಮಹಾಪೂರವೇ ಹರಿದು ಬಂದಿದೆ. ಹಲವರು ಹಣ ನೀಡಿದರೆ ಮತ್ತೆ ಕೆಲವರು ಚಿಕ್ಕ ಮಕ್ಕಳಿಗೆ ಬಟ್ಟೆ, ಔಷಧಿ, ಟೂಥಪೇಸ್ಟ್, ಛತ್ರಿ, ನ್ಯಾಪ್ಕಿನ್ ಸೇರಿದಂತೆ ಅನೇಕ ವಸ್ತುಗಳನ್ನು ನೀಡಿ ಸಹಕರಿಸಿದ್ದಾರೆ.
ನಿಧಿ ಸಂಗ್ರಹಿಸುವಾಗ ಸೇಡಂ SI ಶಂಕರಗೌಡ ಪಾಟೀಲ್, PSI ಸುರೇಶ್ ಕುಮಾರ್, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸದಾಶಿವ ಸ್ವಾಮೀಜಿ ಸೇರಿದಂತೆ ಅನೇಕರು ಸಾಥ್ ನೀಡಿದ್ರು.