ಕಲಬುರಗಿ: ಹೈದರಾಬಾದ್ ಕರ್ನಾಟಕದ ಆರಾಧ್ಯ ದೈವ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ 197 ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ.
ಇದೆ ತಿಂಗಳು 25 ಸೋಮವಾರದಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶರಣ ಬಸವೇಶ್ವರರ ಭವ್ಯವಾದ ರಥೋತ್ಸವ ನಡೆಯಲಿದೆ. ಅಂದು ಸಾಯಂಕಾಲ 6 ಗಂಟೆ 15 ನಿಮಿಷಕ್ಕೆ ಮಹಾದಾಸೋಹಿ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಶರಣಬಸಪ್ಪ ಅಪ್ಪ ಅವರು ಪರಶು ಬಟ್ಟಲು ಪ್ರದರ್ಶಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಇದಕ್ಕೂ ಒಂದು ದಿನ ಮುನ್ನ ಭಾನುವಾರ ಸಾಯಂಕಾಲ ನಾಲ್ಕು ಗಂಟೆಗೆ ಉಚ್ಚಾಯಿ( ಚಿಕ್ಕ ರಥೋತ್ಸವ) ಜರುಗಲಿದೆ. ಈಗಾಗಲೇ ಪಲ್ಲಕ್ಕಿ ಮಹೋತ್ಸವ, ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳು ಜರುಗುತ್ತಿವೆ. ಜಾತ್ರಾ ಮೈದಾನದಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ದೇವಸ್ಥಾನ ಅವರಣದಲ್ಲಿ ರಥ ಸಿದ್ಧತೆ ಜೋರಾಗಿ ನಡೆದಿದೆ.