ರಾಣೆಬೆನ್ನೂರ: 'ಉತ್ತರ ಕರ್ನಾಟಕದ ಹೆಬ್ಬಾಗಿಲು' ಎಂದು ಪ್ರಖ್ಯಾತಿಗೊಂಡಿರುವ ರಾಣೆಬೆನ್ನೂರಿನಲ್ಲಿ ಮತ್ತೊಂದು ಉಪಕದನಕ್ಕೆ ವೇದಿಕೆ ಸಜ್ಜಾಗಿದೆ. ಕೋಳಿವಾಡ ಮತ್ತು ಆರ್.ಶಂಕರ್ ನಡುವಿನ ಜಿಜ್ಜಾಜಿದ್ದಿನ ಪೈಪೋಟಿಗೆ ಅಖಾಡ ಸಿದ್ದವಾಗುತ್ತಿದೆ.
ಸುಮಾರು 30 ವರ್ಷ ಅಧಿಕಾರದಲ್ಲಿದ್ದ ಕೆ.ಬಿ.ಕೋಳಿವಾಡರನ್ನು ದೂರದ ಬೆಂಗಳೂರಿನಿಂದ ಬಂದಿದ್ದ, ಮಾಜಿ ಉಪಮೇಯರ್ ಆರ್. ಶಂಕರ್ 2018 ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ಮೂಲಕ ರಾಣೆಬೆನ್ನೂರಿನ ಗದ್ದುಗೆ ಹಿಡಿದಿದ್ದರು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಆರ್.ಶಂಕರ್ ಸರಿಯಾದ ಮಾರ್ಗ ಅನುಸರಿಸದೆ ಶಾಸಕ ಸ್ಥಾನದಿಂದ ಅನರ್ಹವಾಗಿ ತಮ್ಮ ಅಸ್ತಿತ್ವವನ್ನು ರಾಣೆಬೆನ್ನೂರಲ್ಲಿ ಕಳೆದುಕೊಂಡರು. ಈಗ ಮತ್ತೆ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಲು ಬರುವುದಿಲ್ಲ. ಹೀಗಾಗಿ ಕೋಳಿವಾಡರು ರಾಣೆಬೆನ್ನೂರಿನೊಳಗೆ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ರೆಡಿಯಾಗಿದ್ದಾರೆ.
ಕೋಳಿವಾಡ vs ಶಂಕರ್ :
ಕಳೆದ ಬಾರಿ ಚುನಾವಣೆಯಲ್ಲಿ ಆರ್.ಶಂಕರ್ ಹಾಗೂ ಕೋಳಿವಾಡರ ನಡುವೆ ನೇರ ಪೈಟ್ ಏರ್ಪಟ್ಟಿತು. ಈ ವೇಳೆ ಗೆಲುವು ಶಂಕರ್ ಪಾಲಾದ ಹಿನ್ನೆಲೆಯಲ್ಲಿ ಕೋಳಿವಾಡ ಮತ್ತೊಂದು ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಕ್ಟೋಬರ್ 21ಕ್ಕೆ ನಡೆಯುವ ಉಪಚುನಾವಣೆ ಕೋಳಿವಾಡ ಕುಟುಂಬ ಹಾಗೂ ಶಂಕರ ಕುಟುಂಬ ನಡುವೆ ನಡೆಯುವ ಹೋರಾಟ ಎಂದೇ ಹೇಳಲಾಗುತ್ತಿದೆ.
ಕಾಂತೇಶನ ಚಿತ್ತ ರಾಣೆಬೆನ್ನೂರ ನತ್ತ:
ಶಿವಮೊಗ್ಗ ಜಿಪಂ ಸದಸ್ಯ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ. ಈ ಕಾಂತೇಶ್ ಅವರ ಚಿತ್ತ ಈಗಾಗಲೇ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮೇಲೆ ಬಿದ್ದಂತೆ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ತಾಲೀಮು ನಡೆಸುತ್ತಿರುವ ಕಾಂತೇಶ್ಗೆ ಬಿಜೆಪಿ ಟಿಕೇಟ್ ನೀಡಿದರೆ ಅಚ್ಚರಿ ಪಡುವಂತಿಲ್ಲ.
ಟಿಕೆಟ್ ಯಾರ್ಯಾರಿಗೆ?
ರಾಣೆಬೆನ್ನೂರು ಉಪಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೋರಾಟ ಎಂಬಂತಾಗಿದೆ. ಆದರೆ ಬಿಜೆಪಿಯಲ್ಲಿ ಮತ್ತೆ ಟಿಕೆಟ್ ಅಸಮಾಧಾನ ಜೋರಾಗಬಹುದು ಎಂಬ ಮಾತುಗಳು ಕೇಳಿಬರ್ತಿದೆ. ಈ ನಡುವೆ ಬಿಜೆಪಿ ಸರ್ಕಾರ ರಚನೆಯ ಸಮಯದಲ್ಲಿ ಆರ್.ಶಂಕರ್ ಬೆಂಬಲ ನೀಡಿದ್ದಾರೆ. ಈ ಕಾರಣದಿಂದ ಆರ್. ಶಂಕರ್ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬಹುದು ಎಂಬ ಮಾತಿದೆ. ಜೊತೆಗೆ ಕೇಲಗಾರ, ಅರುಣಕುಮಾರ, ಕಾಂತೇಶ ಈಶ್ವರಪ್ಪ ಹೆಸರು ಪ್ರಸ್ತಾಪವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೋಳಿವಾಡರ ಉಪಚುನಾವಣೆ ಎಂಬ ಅಂಶ ಇಟ್ಟುಕೊಂಡು ತಮ್ಮ ಸುಪುತ್ರ ಪ್ರಕಾಶ ಕೋಳಿವಾಡರಿಗೆ ಟಿಕೆಟ್ ಕೊಡುಸುತ್ತಾರೆ ಎಂಬ ಮಾತುಗಳ ಜೋರಾಗಿವೆ.
ಸುಪ್ರೀಂ ತೀರ್ಪುನ ಮೇಲೆ ಭವಿಷ್ಯ?
ಅನರ್ಹ ಶಾಸಕರ ಬಗ್ಗೆ ಸೋಮವಾರ ಸುಪ್ರೀಂಕೊರ್ಟ್ನಲ್ಲಿ ವ್ಯತಿರಿಕ್ತ ತೀರ್ಪು ಬಂದರೆ ಅನರ್ಹ ಶಾಸಕರ ಕುಟುಂಬಸ್ಥರು ಅಥವಾ ಆಪ್ತರು ಅಖಾಡದಲ್ಲಿ ಧುಮುಕಬಹುದು ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸೋಮವಾರ ಪ್ರಕಟವಾಗಲಿರುವ ಸುಪ್ರೀಂ ತೀರ್ಪು ಮಹತ್ವ ಎನಿಸಿದೆ.