ಹಾಸನ: ಪಕ್ಷ ಸಂಘಟನೆಗೆ ಪದಾಧಿಕಾರಿಗಳು ಬೂತ್ ಮಟ್ಟದಿಂದಲೂ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಜಯ ಸಾಧಿಸಬೇಕು ಎಂದು ಬಿಜೆಪಿ ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಸುರೇಶ್ ಬಾಬು ಕರೆ ನೀಡಿದರು.
ನಗರದ ಶಂಕರಮಠ ರಸ್ತೆಯಲ್ಲಿರುವ ಶ್ರೀ ಭಾರತಿ ತೀರ್ಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಹಾಸನ ಘಟಕದ ನಗರ ಮತ್ತು ಗ್ರಾಮಾಂತರ ಮಂಡಲ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ ಶಕ್ತಿ ಕೇಂದ್ರಗಳು, ಮಹಾಶಕ್ತಿ ಕೇಂದ್ರಗಳು ಮತ್ತು ವಿಭಾಗಗಳನ್ನು ಪಕ್ಷ ಸಂಘಟನೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಚಿಸಲಾಗಿದ್ದು, ನಗರದಲ್ಲಿ 35 ವಾರ್ಡ್ಗಳಿದ್ದು, 131 ಮತಗಟ್ಟೆಗಳಿವೆ. ಪ್ರತಿ ಮತಘಟ್ಟೆಯಲ್ಲಿಯೂ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ ಎಂದರು.
ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ವ್ಯಕ್ತಿಯ ಮೇಲೆ ಸಂಘಟನೆ ಮಾಡುವುದು ಬೇಡ. ಯಾವುದೋ ಕಾಲದಲ್ಲಿ ನಮಗೆ ತಿರುಗು ಬಣ ಆಗುವಂತಹ ಪರಿಸ್ಥಿತಿ ಎದುರಾಗುತ್ತದೆ. ಕೆಲವರು ಉಲ್ಲೇಖ ಮಾಡುತ್ತಾರೆ. ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ನಮ್ಮ ಜವಾಬ್ದಾರಿ ಯಾರೋ ಮತಗಳನ್ನ ಗಳಿಸುವಾಗ ಆ ವ್ಯಕ್ತಿ ಹೆಸರು ಹೇಳಿದರೆ ಅನುಕೂಲ ಆಗುವುದಾದರೆ ಅವರ ಹೆಸರು ಹೇಳಿ. ಆದರೆ ಸಂಘಟನೆ ಬಂದಾಗ ಭಾರತೀಯ ಜನತಾ ಪಾರ್ಟಿಯನ್ನು ತಾಯಿಯ ರೀತಿಯಲ್ಲಿ ಸಂಘಟನೆ ಬೆಳೆಸಿ ಉಳಿಸುವ ಜಾವಾಬ್ದಾರಿ ಪದಾಧಿಕಾರಿಗಳದ್ದಾಗಿದೆ ಎಂದರು.