ಹಾಸನ: ರಾಜ್ಯದ ಬೇರೆ ಕಡೆ ಜನರು ಗುಂಪು ಗೂಡಿದರೆ ಕೋವಿಡ್ ಕಾನೂನು ಉಲ್ಲಂಘನೆ ಎಂದು ಹೇಳುವ ಇವರು. ಆರ್.ಆರ್. ನಗರ ಮತ್ತು ಶಿರಾದಲ್ಲಿ ಕೊರೊನಾ ಇರಲಿಲ್ಲವೆ? ಕೋವಿಡ್ ನಿಯಮಗಳು ಇವರಿಗೆ ಅನ್ವಯಿಸುವುದಿಲ್ಲವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರಾಜಕೀಯ ಪಕ್ಷಗಳಿಗೆ ಪ್ರಶ್ನಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಏರ್ಪಡಿಸಿದ್ದ ರೈತ ಮುಖಂಡ ಕೋವಿ ಬಾಬಣ್ಣ, ಮೇಳೇನಹಳ್ಳಿ ನಾಗರಾಜ್ ಹಾಗೂ ಹಳೆಬೀಡಿನ ಮಲ್ಲಿಕಾರ್ಜುನ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಕೊರೊನಾ ವೈರಸ್ಗೆ ಭಯ ಬೀಳುವ ಅವಶ್ಯಕತೆ ಇಲ್ಲ. ಶೀತ ಪ್ರದೇಶಗಳಾದ ಚೈನಾ, ಅಮೇರಿಕಾಗಳಲ್ಲಿ ಪ್ರತಿ ವರ್ಷ ಶೀತದಿಂದಲೇ ಎರಡು ಲಕ್ಷ ಜನರು ಸಾವನಪ್ಪುತ್ತಿದ್ದಾರೆ. ಕೋವಿಡ್ ಎನ್ನುವುದು ಶೀತವನ್ನು ಉತ್ಪತ್ತಿ ಮಾಡುವ ವೈರಾಣುವಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಿದರೆ ಸಾಕು ಎಂದರು.
ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಬೇಜವಬ್ಧಾರಿ ತೋರಿದ್ದಾರೆ. ಆರ್.ಆರ್. ನಗರ ಮತ್ತು ಶಿರಾದಲ್ಲಿ ಕೊರೊನಾ ಇರಲಿಲ್ಲವೆ? ಕೋವಿಡ್ ನಿಯಮಗಳು ಇವರಿಗೆ ಅನ್ವಯಿಸುವುದಿಲ್ಲವೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ತೃತೀಯ ದರ್ಜೆಯ ರಾಜಕಾರಣ ಮಾಡಿಕೊಂಡು ರೈತರನ್ನು ಕಡೆಗಣಿಸಲಾಗಿದೆ. ರೈತ ವಿರೋಧಿ ಸುಗ್ರಿವಾಜ್ಞೆಗಳನ್ನು ವಿರೋಧಿಸಿ ಡಿ.5 ರಂದು ರಾಜ್ಯದಾದ್ಯಂತ ಒಂದು ಗಂಟೆ ಕಾಲ ಸಾಂಕೇತಿಕವಾಗಿ ಹೆದ್ದಾರಿಯಲ್ಲಿ ಚಳವಳಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂದೇಶ ರವಾನೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಈ ರೈತ ವಿರೋಧಿ ಕಾಯ್ದೆಗಳು ಲೋಕಸಭೆ, ವಿಧಾನಸಭೆಯಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಹೋಗಿವೆ. ರಾಷ್ಟ್ರಪತಿ ಅಂಗೀಕಾರ ಸಿಕ್ಕಿ ಇನ್ನೇನು ಜಾರಿಯಾಗಲಿವೆ. ವಿಧಾನ ಪರಿಷತ್ನಲ್ಲಿ ಈ ಕಾಯ್ದೆಗಳಿಗೆ ಹಿನ್ನಡೆಯಾಗಿದೆ. ಸದ್ಯ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಅಲ್ಲಿಯೂ ಅವರೇ ಬಹುಮತ ಪಡೆದು ಕಾಯ್ದೆಗಳನ್ನು ಅಂಗೀಕರಿಸಬಹುದು ಎಂದರು.