ಹಾಸನ: ನಗರದ ಹೇಮಾವತಿ ಪ್ರತಿಮೆ ಪಕ್ಕದಲ್ಲಿ ಸ್ಥಳೀಯ ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ನಿರ್ಮಿಸುತ್ತಿರುವ ಟ್ಯಾಕ್ಸಿ ನಿಲ್ದಾಣದಲ್ಲಿ ಜನಪ್ರತಿನಿಧಿಗಳ ನಾಮಫಲಕ ಅಳವಡಿಕೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ನಿರ್ಮಿಸಿರುವ ಟ್ಯಾಕ್ಸಿ ನಿಲ್ದಾಣ ಇದಾಗಿದ್ದು, ಶಾಸಕ ಪ್ರೀತಂ ಜೆ. ಗೌಡ ಭಾವಚಿತ್ರ ಇರುವ 15 ಫ್ಲೆಕ್ಸ್ ಅಳವಡಿಸಲು ಬಿಜೆಪಿ ಕಾರ್ಯಕರ್ತರು ನಿರ್ಧರಿಸಿ ನಾಮಫಲಕಗಳನ್ನು ಸ್ಟ್ಯಾಂಡ್ನ ಎರಡೂ ಬದಿಗೆ ಹಾಕಿದ್ದರು. ಟ್ಯಾಕ್ಸಿ ನಿಲ್ದಾಣಕ್ಕೆ ಜಾಗ ಮೀಸಲಿಟ್ಟಿದ್ದು, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗಾಗಿ ಅವರ ಭಾವಚಿತ್ರವಿರುವ ನಾಮಫಲಕವನ್ನು ಹಾಕಬೇಕೆಂಬುದು ಜೆಡಿಎಸ್ ಕಾರ್ಯಕರ್ತರ ವಾದ. ಈ ಕಾರಣಕ್ಕಾಗಿ ಕಾರು ನಿಲ್ದಾಣದ ಸ್ಥಳ ಮೀಸಲಿರಿಸಿದ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರ ನಾಮ ಫಲಕ ಹಾಕಲಾಗಿದೆ.
ಈ ವಿಚಾರ ಶಾಸಕ ಪ್ರೀತಂ ಜೆ. ಗೌಡ ಅವರ ಗಮನಕ್ಕೂ ಬಂದಿದ್ದು, ಹೆಚ್ ಡಿ ದೇವೇಗೌಡರು ಹಿರಿಯ ರಾಜಕಾರಣಿ. ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ ಅವರ ಭಾವಚಿತ್ರ ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ. ಆ ಸ್ಥಳ ಬಿಟ್ಟು ಬೇರೆ ಕಡೆಗೆ ಫಲಕ ಅಳವಡಿಸಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಬಿಗಿ ಭದ್ರತೆ:
ನಾಮಫಲಕ ಅಳವಡಿಕೆ ವಿಚಾರವಾಗಿ ಗೊಂದಲ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಹೇಮಾವತಿ ಪ್ರತಿಮೆ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪೊಲೀಸರು ಬಿಜೆಪಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ ಬಳಿಕ ಹೆಚ್ ಡಿ ದೇವೇಗೌಡರ ಭಾವಚಿತ್ರವಿರುವ ನಾಮಫಲಕ ತೆರವು ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಮತ್ತೆ ಬಿಜೆಪಿ ಕಾರ್ಯಕರ್ತರು ಶಾಸಕ ಪ್ರೀತಂ ಗೌಡ ಅವರ ನಾಮಫಲಕವನ್ನು ಹಾಕುತ್ತಿದ್ದಾರೆ.