ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಗ್ಗೋವೆ ಗ್ರಾಮದಲ್ಲಿ ಇಂದು ಮುಂಜಾನೆ ಆನೆಯೊಂದು ಮನೆಯೆದುರಿನ ದನದ ಕೊಟ್ಟಿಗೆ ಮೇಲೆ ತನ್ನ ಆಕ್ರೋಶ ತೋರಿದ್ದು, ಮನೆಯಲ್ಲಿದ್ದವರು ಸ್ವಲ್ಪದರಲ್ಲಿ ಬಚಾವಾಗಿದ್ದಾರೆ.
ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಒಂಟಿ ಸಲಗ ಏಕಾಏಕಿ ಕೊಟ್ಟಿಗೆ ಮೇಲೆ ದಾಳಿ ಮಾಡಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಮೇಲೆ ದಾಳಿ ಮಾಡುವ ಉದ್ದೇಶದಿಂದ ನುಗ್ಗಿದೆ ಎನ್ನಲಾಗ್ತಿದೆ. ಪ್ರತಿದಿನ ಈ ಗ್ರಾಮದ ಸುತ್ತ ಕಾಫಿ ತೋಟಗಳ ಒಳಗೆ ಹಾಗೂ ರಸ್ತೆಗಳಲ್ಲಿ ಸಂಚರಿಸುವ ಆನೆಗಳು ವಿಪರೀತ ಭೀತಿಯನ್ನುಂಟು ಮಾಡುತ್ತಿವೆ.
ಅರಣ್ಯ ಇಲಾಖೆಯಿಂದ ಆನೆ ಸಂಚಾರದ ಬಗ್ಗೆ ಮಾಹಿತಿಗೆ ಉಪಕರಣವನ್ನು ಅಳವಡಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆಯವರು ಆನೆಗಳನ್ನು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಓಡಿಸುವುದನ್ನು ಬಿಟ್ಟರೆ, ಆನೆ ಸೆರೆ ಹಿಡಿಯುವ ಬಗ್ಗೆ ಇಲಾಖೆಯಿಂದ ಮಾರ್ಗದರ್ಶನ ಇಲ್ಲದ ಕಾರಣ ಕೈಚೆಲ್ಲಿ ಕುಳಿತಿದ್ದಾರೆ. ಜಿಲ್ಲೆಯ ಸಕಲೇಶಪುರ ಹಾಗೂ ಆಲೂರು ಭಾಗದ ಗ್ರಾಮಸ್ಥರು ಆನೆ ದಾಳಿಯ ಕಾರಣ ಆತಂಕದಲ್ಲಿ ದಿನ ದೂಡುವಂತಾಗಿದೆ.