ನರಗುಂದ(ಗದಗ): ನರಗುಂದದಲ್ಲಿ ಮತ್ತೆ ಮತ್ತೆ ಭೂಕುಸಿತ ಉಂಟಾಗುತ್ತಿದ್ದು ಇಂದು ಕೂಡಾ ಶಂಕರಲಿಂಗ ಓಣಿಯ ಅಂಬೋಜಿಯವರ್ ಎಂಬುವವರ ಮನೆ ಮುಂದೆ ಭೂಮಿ ಕುಸಿದಿದ್ದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಜನರು ಓಡಾಡುವ ಜಾಗದಲ್ಲೇ ಸುಮಾರು 10 ಅಡಿಗಳಷ್ಟು ಭೂಮಿ ಕುಸಿದಿದೆ. ಮಕ್ಕಳು ಕೂಡಾ ಇಲ್ಲಿ ಆಟವಾಡುತ್ತಿರುತ್ತಾರೆ. ಆಗ್ಗಾಗ್ಗೆ ಇಲ್ಲಿ ಭೂಮಿ ಕುಸಿಯುತ್ತಿರುವುದು ಜನರ ಭಯಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿರುವುದರಿಂದ ಪದೇ ಪದೇ ಭೂಮಿ ಕುಸಿಯುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನರಗುಂದ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಅನೇಕ ಬಾರಿ ಇಲ್ಲಿ ಭೂ ಕುಸಿತ ಸಂಭವಿಸಿದೆ. ಈ ಕಾರಣ ವಿಜ್ಞಾನಿಗಳ ಎರಡು ತಂಡವನ್ನು ಕರೆಸಿ ಪರಿಶೀಲನೆ ನಡೆಸಿ ಭೂಕುಸಿತಕ್ಕೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಸೂಚಿಸಿದ್ದರು. ಆದರೆ ಇದುವರೆಗೂ ನಿಖರ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.

ಒಂದು ತಿಂಗಳ ಹಿಂದೆ ಕೂಡಾ ಸಿದ್ದರಾಮೇಶ್ವರ ನಗರದ ರವಿ ಎಂಬುವವರ ನಿವಾಸದಲ್ಲಿ ಅಡುಗೆಮನೆಯೊಳಗೆ ಸುಮಾರು 8 ಅಡಿಯಷ್ಟು ಭೂಮಿ ಕುಸಿದಿತ್ತು. ಈ ಕಾರಣದಿಂದ ಜನರು ಬಹಳ ಆತಂಕ್ಕೆ ಒಳಗಾಗಿದ್ಧಾರೆ. ಪದೇ ಪದೆ ಹೀಗೆ ಭೂಮಿ ಕುಸಿಯುತ್ತಿದ್ದರೆ ಮುಂದೆ ಹೇಗೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
