ಗದಗ: ಸತತ ಮಳೆಯಿಂದ ರೈತರು ಬೆಳೆದ ಅರ್ಧಕ್ಕಿಂತ ಹೆಚ್ಚು ಬೆಳೆ ಮಳೆರಾಯನ ಪಾಲಾಗಿದೆ. ಹಾಗೋ ಹೀಗೋ ಇನ್ನುಳಿದ ಬೆಳೆಗೆ ಕಳ್ಳರ ಕಣ್ಣು ಬಿದ್ದಿದೆ. ಗದಗದಲ್ಲಿ ಈಗ ಬೆಳೆ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಸತ್ಯಪ್ಪ ಹೊನಗೇರಿ ಎಂಬುವವರ ಜಮೀನಿನಲ್ಲಿ ಸುಮಾರು ಆರು ಕ್ವಿಂಟಲ್ಗಿಂತಲೂ ಹೆಚ್ಚು ಹಸಿ ಮೆಣಸಿನಕಾಯಿ ಕಳ್ಳತನ ಮಾಡಲಾಗಿದೆ. ರಾತ್ರೋರಾತ್ರಿ ಹೊಲಗಳಿಗೆ ಕಳ್ಳರು ನುಗ್ಗಿ ಬೆಳೆದಿರುವ ಮೆಣಸಿನಕಾಯಿಯನ್ನು ದರೋಡೆ ಮಾಡಿ ಮತ್ತು ಸಿಕ್ಕಲ್ಲೆ ಕಿತ್ತು ಬಿಸಾಕಿ ಪರಾರಿಯಾಗಿದ್ದಾರೆ. ಸುಮಾರು ಮೂರು ಕ್ವಿಂಟಲ್ ಮೆಣಸಿನಕಾಯಿಯನ್ನು ಹೊತ್ತೊಯ್ದಿದ್ದಾರೆ ಎನ್ನಲಾಗ್ತಿದೆ. ಉಳಿದದ್ದನ್ನು ಹೊಲದಲ್ಲಿಯೇ ಬಿಸಾಡಿ ಎಲ್ಲೆಂದರಲ್ಲಿ ಬೆಳೆಯನ್ನು ತುಳಿದು, ಮೆಣಸಿನ ಕಾಯಿ ಗಿಡಗಳನ್ನು ಸಹ ಕಿತ್ತು ಬದುವಿಗೆ ಹಾಕಿ ಪರಾರಿಯಾಗಿದ್ದಾರೆ.
ತಿಮ್ಮಾಪೂರ ಗ್ರಾಮದಲ್ಲಿ ಇವರಷ್ಟೇ ಅಲ್ಲದೇ ಇನ್ನೊಬ್ಬರಾದ ಚೆನ್ನಪ್ಪ ಹೊನಗೇರಿ ಎಂಬುವರ ಜಮೀನಿನಲ್ಲಿಯೂ ಸಹ ಇದೇ ರೀತಿ ಮೆಣಸಿನಕಾಯಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸುಮಾರು 30,000 ರೂ. ಆದಾಯದಷ್ಟು ಬೆಳೆಯನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಜಮೀನಿನ ಮಾಲೀಕರು ಹೇಳ್ತಿದ್ದಾರೆ.
ಇನ್ನು ಹೊಲದಲ್ಲಿ ಬಿದ್ದಿದ್ದ ಮೆಣಸಿನ ಕಾಯಿ ಗಿಡಗಳನ್ನು ನೋಡಿ ರೈತ ಸತ್ಯಪ್ಪ ಒಂದು ಕ್ಷಣ ದಿಗಿಲು ಬಡಿದಂತೆ ಕೂತಿದ್ದರು. ಜಿಲ್ಲಾಡಳಿತ ಇಂತಹ ಬೆಳೆ ಕಳ್ಳರಿಂದ ರೈತರನ್ನು ರಕ್ಷಣೆ ಮಾಡಬೇಕು ಎಂದು ರೈತರು ಒತ್ತಾಯ ಮಾಡ್ತಿದ್ದಾರೆ.