ಹುಬ್ಬಳ್ಳಿ: ಕಾಂಗ್ರೆಸ್ ತನ್ನ ತಪ್ಪು ಮುಚ್ಚಿಕೊಳ್ಳಲು ಮತ್ತು ಜನರ ದಾರಿ ತಪ್ಪಿಸಲು ಪ್ರತಿಭಟನೆಯ ನಾಟಕವಾಡುತ್ತಿದೆ. ಇಡಿ ಕಾನೂನು ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅವರಿಗಿರುವ ಮಾಹಿತಿ ಆಧರಿಸಿಯೇ ತನಿಖೆ ಕೈಗೊಂಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಕಾಂಗ್ರೆಸ್ 40 ರಿಂದ 50 ವರ್ಷ ದೇಶವನ್ನು ಆಳಿದೆ. ಆ ಅವಧಿಯಲ್ಲಿ ಲೂಟಿ ಹೊಡೆದಿದ್ದಾರೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಅದೆಷ್ಟೋ ಹಗರಣಗಳಾಗಿವೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅದೇ ನರೇಂದ್ರ ಮೋದಿ ಒಂದು ಕಪ್ಪು ಚುಕ್ಕೆ ಇಲ್ಲದೇ ಆಡಳಿತ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ಹಗರಣಗಳೇ ಇಲ್ಲ. ಯಾರೂ ಆರೋಪ ಮಾಡುವ ಪರಿಸ್ಥಿತಿ ಇಲ್ಲ ಎಂದರು.
ಕಾಂಗ್ರೆಸ್ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ ಎಂದರೆ ಅವರು ಕಾನೂನು ರೀತಿ ಎದುರಿಸಬೇಕಾಗಿತ್ತು. ಅದು ಬಿಟ್ಟು ಬೀದಿಗಿಳಿದು ಹೋರಾಟ ಮಾಡುವುದನ್ನು ನೋಡಿದರೆ ಕಾಂಗ್ರೆಸ್ನಿಂದ ತಪ್ಪಾಗಿದೆ ಎಂಬುದು ಗೊತ್ತಾಗುತ್ತದೆ. ತಪ್ಪಿಲ್ಲ ಎಂದರೆ ಹೆದರುವ ಅವಶ್ಯಕತೆಯೇ ಇಲ್ಲ. ಸರಿಯಾದ ರೀತಿಯಲ್ಲಿ ಉತ್ತರ ನೀಡಿದರೆ ಇಡಿ ಅವರೇ ಬಿಟ್ಟು ಕಳಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಇಡಿ ದುರ್ಬಳಕೆ ಆರೋಪ - ಮಂಗಳೂರಿನ ಐಟಿ ಕಚೇರಿಗೆ ನುಗ್ಗಲೆತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ