ಧಾರವಾಡ: ಧಾರವಾಡದಲ್ಲಿ ನಡೆಯುತ್ತಿರುವ 26 ರಾಷ್ಟ್ರೀಯ ಯುವ ಜನೋತ್ಸವಕ್ಕೆ ಅವಳಿ ನಗರದ ಆಡಳಿತ ವ್ಯವಸ್ಥೆ, ಸಂಘ - ಸಂಸ್ಥೆಗಳು ಹೃದಯ ಶ್ರೀಮಂತಿಕೆ ಮೆರೆದಿವೆ. ಇದೇ ಮೊದಲ ಬಾರಿಗೆ ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಉತ್ಸವಕ್ಕೆ ಸ್ವಯಂ ಪ್ರೇರಿತವಾಗಿ ಸೇವೆ, ಪ್ರಾಯೋಜಕತ್ವ, ದೇಣಿಗೆ, ಪರಿಕರಗಳನ್ನು ನೀಡಿ ವೈಭವದ ಸಂಭ್ರಮೋಲ್ಲಾಸದಲ್ಲಿ ಭಾಗಿಯಾಗಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 12ರಂದು ರಾಷ್ಟ್ರೀಯ ಯುವ ಜನೋತ್ಸವವನ್ನು ಉದ್ಘಾಟಿಸಲಿದ್ದು, ಈ ವೈಭವದ ಸಮಾರಂಭದ ಯಶಸ್ಸಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಸಂಸ್ಥೆಗಳು ಒಂದೊಂದು ರೀತಿಯಲ್ಲಿ ನೆರವಾಗುತ್ತಿವೆ. ಜನರ ಸಹಭಾಗಿತ್ವ (ಜನ್ ಭಾಗೀದಾರ್) ಕುರಿತ ಗೌರವಾನ್ವಿತ ಪ್ರಧಾನಮಂತ್ರಿ ಅವರ ಆಶಯವನ್ನು ಇಲ್ಲಿ ಸಾಕಾರಗೊಳಿಸುತ್ತಿದ್ದಾರೆ. “ಜೀವ ನಮ್ಮ ಮಾತು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು.
ಜೀವನ ನಮ್ಮ ಮಾತು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು” ಎಂಬ ಭಾರತದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ವಾಣಿಯಂತೆ ಯುವ ಜನೋತ್ಸವವನ್ನು ಅವಳಿ ನಗರದ ಹೃದಯ ಶ್ರೀಮಂತಿಕೆಯಿಂದ ರೂಪಿಸಲಾಗಿದೆ. ಜನ ಪಾಲುದಾರರಾದರೆ ಯಾವುದೇ ಆಂದೋಲನ ಜನಾಂದೋಲನವಾಗುತ್ತದೆ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಿ ತಾರ್ಕಿಕ ಅಂತ್ಯ ಕಾಣುತ್ತದೆ ಎಂಬುದಕ್ಕೆ ಈ ಉತ್ಸವ ಒಂದು ನಿದರ್ಶನವಾಗಿದೆ.
ಭಾರತೀಯ ತೈಲ ನಿಗಮ ಉಚಿತ ಡಿಸೇಲ್: ಪ್ರತಿನಿಧಿಗಳು ಯುವ ಜನೋತ್ಸವ ಕಣ್ತುಂಬಿಕೊಳ್ಳಲು ಜಿಲ್ಲಾಡಳಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಈ ಸಾರಿಗೆ ಬಸ್ ಹಾಗೂ ಜಿಲ್ಲಾಡಳಿತದ ಆಯ್ದ ವಾಹನಗಳಿಗೆ ಭಾರತೀಯ ತೈಲ ನಿಗಮ ಉಚಿತವಾಗಿ ಡೀಸೆಲ್ ಪೂರೈಸುತ್ತಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಶೇಷತೆ, ರಾಷ್ಟ್ರದ ವೈವಿಧ್ಯತೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಮೂಲಕ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಮಹತ್ಕಾರ್ಯಕ್ಕೆ ಕೈ ಜೋಡಿಸಿದೆ.
7500 ಪ್ರತಿನಿಧಿಗಳಿಗೆ ಉಚಿತವಾಗಿ ಮಿಶ್ರ ಪೇಡಾ: ಧಾರವಾಡ ಎಂದಾಕ್ಷಣ ಪೇಡಾ ನೆನಪಿಗೆ ಬರುವುದು ಸಹಜ. ಬಾಯಲ್ಲಿ ನೀರೂರಿಸುವ, ಒಮ್ಮೆ ಸವಿದರೆ ಜೀವನಪರ್ಯಂತ ನೆನಪಿನಲ್ಲಿ ಉಳಿಯುವ ಪೇಡಾ ನೀಡುವ ಮೂಲಕ ರಾಷ್ಟ್ರೀಯ ಉತ್ಸವವನ್ನು ಸ್ಮರಣೀಯವಾಗಿಸಲು ಮುಂದಾಗಿದೆ, ಧಾರವಾಡ ಮಿಶ್ರಾ ಪೇಡಾ ಸಂಸ್ಥೆ. ದೇಶದ ಎಲ್ಲ ಭಾಗಗಳಿಂದ ಆಗಮಿಸುತ್ತಿರುವ ಎಲ್ಲ 7,500 ಪ್ರತಿನಿಧಿಗಳಿಗೆ ಉಚಿತವಾಗಿ ಮಿಶ್ರಾ ಪೇಡಾ ವಿತರಿಸಲು ಸಜ್ಜಾಗಿದೆ. ಈಗಾಗಲೇ ಬಹುತೇಕ ಪ್ಯಾಕಿಂಗ್ ಪೂರ್ಣಗೊಳಿಸಿದ್ದು, ಪೇಡಾದ ಸ್ವಾದ ಮತ್ತು ಘಮಲನ್ನು ದೇಶಾದ್ಯಂತ ಪಸರಿಸಲು ಮುಂದಾಗಿದೆ.
ಸಂಸ್ಥೆಗಳಿಂದ 10 ಲಕ್ಷ ಕುಡಿಯುವ ನೀರಿನ ಪೂರೈಕೆ: ಯುವ ಜನೋತ್ಸವ ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರಗೊಳಿಸುತ್ತಿದ್ದು, ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಪ್ರತಿನಿಧಿಗಳಿಗೆ ಕುಡಿಯುವ ನೀರಿನ ಬಾಟೆಲ್ ಗಳನ್ನು ಪೂರೈಸಲು ಹಲವು ಸಂಸ್ಥೆಗಳು ಮುಂದಾಗಿವೆ. ಕೆನರಾಬ್ಯಾಂಕ್ ಮತ್ತು ಟಾಟಾ ಹಿಟಾಚಿ ಸಂಸ್ಥೆ ತಲಾ ಎರಡು ಸಾವಿರ ಬಾಟೆಲ್ ಗಳನ್ನು ಒದಗಿಸುತ್ತಿವೆ. ಇದರ ಜೊತೆಗೆ ಹುಬ್ಬಳ್ಳಿ ಧಾರವಾಡ ವೈನ್ ಅಸೋಸಿಯೇಷನ್ ಕೂಡ 10 ಲಕ್ಷ ಕುಡಿಯುವ ನೀರಿನ ಬಾಟೆಲ್ ಗಳ ಕೊಡುಗೆ ನೀಡುತ್ತಿದೆ.
ಹೆಸ್ಕಾಂನಿಂದ ಉಚಿತ ವಿದ್ಯುತ್: ವರ್ಣರಂಜಿತ ಉತ್ಸವಕ್ಕೆ ವಿಶೇಷ ದೀಪಾಲಂಕಾರ ಮಾಡಲು ಹೆಸ್ಕಾಂ ಉಚಿತವಾಗಿ ವಿದ್ಯುತ್ ಪೂರೈಸುತ್ತಿದೆ. ವಿದ್ಯುತ್ ಜ್ಯೋತಿಯೊಂದಿಗೆ ಜ್ಞಾನದ ಜ್ಯೋತಿ ಬೆಳಗಲು ನೆರವಾಗಿದೆ. ಕ್ರೆಡೆಲ್ ಸಂಸ್ಥೆ ಆರ್ಥಿಕ ಸಹಾಯ ಮಾಡಿದರೆ ಕ್ರಡಾಯಿ ಸಂಸ್ಥೆ ಪ್ರತಿನಿಧಿಗಳಿಗೆ ವೆಲ್ ಕಂ ಕಿಟ್ ಗಳನ್ನು ಒದಗಿಸಿದೆ.
ವಿವಿಧ ಸಹಾಯ : ಹುಬ್ಬಳ್ಳಿ – ಧಾರವಾಡ ಹೋಟೆಲ್ ಅಸೋಸಿಯೇಷನ್, ಪ್ರತಿನಿಧಿಗಳಿಗೆ ರಿಯಾಯಿತಿ ದರದಲ್ಲಿ ಕೊಠಡಿಗಳನ್ನು ಒದಗಿಸಿದ್ದು, ಚೇಂಬರ್ ಆಫ್ ಕಾಮರ್ಸ್ ಯುವ ಪ್ರತಿನಿಧಿಗಳು ನೆಲೆಸುತ್ತಿರುವ ಹಾಸ್ಟೆಲ್ ಗಳಿಗೆ ಒಂದು ಸಾವಿರ ಬಕೆಟ್ ಗಳನ್ನು ನೀಡಿದೆ. ಧಾರವಾಡದ ಅಕ್ವೇಸ್ ಪ್ರವೈಟ್ ಲಿಮಿಟೆಡ್ ಸ್ಮರಣಿಕೆಗಳನ್ನು, ಯುಫ್ಲೆಕ್ಸ್ ಲಿಮಿಟೆಡ್ 5000 ಯೋಗ ಮ್ಯಾಟ್ ಗಳನ್ನು ಪೂರೈಸಿದೆ. ಹುಬ್ಬಳ್ಳಿ – ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಪಾಲಿಕೆ, ಕೆಎಂಎಫ್ ಹುಬ್ಬಳ್ಳಿ, ಟಾಟಾ ಮೋಟರ್ಸ್, ಯುನಿಬೆಕ್ಸ್, ಯೂನಿಯನ್ ಬ್ಯಾಂಕ್, ಧಾರವಾಡ ಜಿಲ್ಲಾ ಕ್ರಷರ್ ಮಾಲೀಕರ ಸಂಘ ಮತ್ತು ಮಹಿಂದ್ರ ಸಂಸ್ಥೆ ಉದಾರವಾಗಿ ಧನ ಸಹಾಯ ಮಾಡಿವೆ.
ವಿವಿಧ ಇಲಾಖೆಗಳು, ಸಿಬ್ಬಂದಿ, ಅಧಿಕಾರಿ ವರ್ಗ, ಒಟ್ಟಾರೆ ಜಿಲ್ಲಾಡಳಿತ ಒಂದಲ್ಲಾ ಒಂದು ರೀತಿಯಲ್ಲಿ ಯುವ ಜನೋತ್ಸವದ ಯಶಸ್ಸಿಗೆ ಸಹಕರಿಸುತ್ತಿದೆ. ಜನರ ಪಾಲ್ಗೊಳ್ಳುವಿಕೆಯಿಂದ ರಾಷ್ಟ್ರೀಯ ಯುವ ಜನೋತ್ಸವ ಆಚರಿಸಲಾಗುತ್ತಿದ್ದು, ಹುಬ್ಬಳ್ಳಿ ಧಾರವಾಡ ಜನತೆ ದೇಶಕ್ಕೆ ಮಾದರಿಯಾಗಿದ್ದಾರೆ. ಯುವ ಜನೋತ್ಸವಕ್ಕೆ ಸಂತೋಷದಿಂದ ದೇಣಿಗೆ, ನೆರವು, ಪ್ರಾಯೋಜಕತ್ವ ಒದಗಿಸಿರುವುದು ಹೆಮ್ಮೆ ತಂದಿದೆ. ಇವರೆಲ್ಲರ ಅಭಿಮಾನಕ್ಕೆ ಜಿಲ್ಲಾಡಳಿತ ಋಣಿಯಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದ್ರೋಹಿ ಚಟುವಟಿಕೆಯನ್ನು ಮಟ್ಟ ಹಾಕುವ ಕೆಲಸ ಮಾಡಲಾಗುತ್ತಿದೆ : ಸಚಿವೆ ಶೋಭಾ ಕರಂದ್ಲಾಜೆ