ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಇದರಿಂದಾಗಿ ವಾಹನ ಸವಾರರಿಗೆ ಸಂಚಾರವೇ ದುಸ್ತರವೆಂಬಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಯಾವೊಬ್ಬ ಜನಪ್ರತಿನಿಧಿಯಾಗಲಿ,ಅಧಿಕಾರಿಯಾಗಲಿ ಇತ್ತ ಸುಳಿಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ ಪ್ರತಿಷ್ಠಿತ ಶ್ರೀಗುರು ಸಿದ್ದಾರೂಢರ ಮಠಕ್ಕೆ ಹಾಗೂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಗಣೇಶ ನಗರದಲ್ಲಿನ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿವೆ. ಮೊದಲೇ ಧೂಳಿನಿಂದ ಕಂಗೆಟ್ಟಿರುವ ಜನತೆ ಈಗ ಮಳೆಗಾಲದಲ್ಲಿ ಸೃಷ್ಠಿಯಾಗಿರುವ ಗುಂಡಿಗಳಿಂದಾಗಿ ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದಾರೆ.
ಕಳೆದ ಮೂರು ವರ್ಷಗಳಿಂದ ಇಂತಹ ರಸ್ತೆಗಳಿಂದ ಕಂಗೆಟ್ಟಿದ್ದ ಸ್ಥಳೀಯ ನಿವಾಸಿಗಳು ಅದೆಷ್ಟೋ ಬಾರಿ ಪಾಲಿಕೆ ಅಧಿಕಾರಿಗಳಿಗೆ ಗುಂಡಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ, ರಸ್ತೆ ಮೇಲೆ ಮಕ್ಕಳು ಹಾಗೂ ವೃದ್ಧರು ಕೈಯಲ್ಲಿ ಜೀವ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಿಸಿ ಸಮಸ್ಯೆ ಬಗೆಹರಿಸದಿದ್ದರೆ ನಾವು ಹೋರಾಟ ಮಾಡುವುದು ಖಂಡಿತಾ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.