ಹುಬ್ಬಳ್ಳಿ: ಹಲಾಲ್ ಸರ್ಟಿಫೈಡ್ ಉತ್ಪನ್ನಗಳನ್ನು ಖರೀದಿ ಮಾಡಬಾರದು. ಹಲಾಲ್ ಸರ್ಟಿಫೈಡ್ ದುಡ್ಡು ಭಯೋತ್ಪಾದಕ ಕೃತ್ಯಗಳಿಗೆ ಪೂರೈಕೆಯಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ದೀಪಾವಳಿ ಹಬ್ಬಕ್ಕೆ ಹಿಂದೂಗಳಿಂದ ವಸ್ತುಗಳನ್ನು ಖರೀದಿ ಮಾಡಬೇಕು. ಇಲ್ಲದಿದ್ದರೆ ಅಶಾಸ್ತ್ರವಾಗುತ್ತದೆ. ಹಲಾಲ್ ಉತ್ಪಾದನೆಗಳ ಕಡ್ಡಾಯಗೊಳಿಸುವಿಕೆಯ ವಿರುದ್ಧ ಅಂದೋಲನಗಳು, ಬಹಿರಂಗ ಕಾರ್ಯಕ್ರಮಗಳು, ಕರಪತ್ರ, ಆನ್ಲೈನ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಯಾವುದೇ ಸರ್ಕಾರಿ ಅನುಮತಿಯಿಲ್ಲದೇ ನಡೆಸಲಾಗುತ್ತಿರುವ ಈ ಹಲಾಲ್ ಪ್ರಮಾಣೀಕೃತ ವ್ಯವಸ್ಥೆಯನ್ನು ಸರ್ಕಾರ ಬ್ಯಾನ್ ಮಾಡಬೇಕು. ಹಲ್ದಿರಾಮ, ಹಿಮಾಲಯ, ನೆಸ್ಲೆ ಇವುಗಳಂತಹ ಕಂಪನಿಗಳು ತಮ್ಮ ಸಸ್ಯಾಹಾರಿ ಪದಾರ್ಥಗಳನ್ನು ಸಹ ಹಲಾಲ್ ಸರ್ಟಿಫಿಕೇಟ್ ಗೊಳಿಸಿ ಮಾರಾಟ ಮಾಡುತ್ತಿವೆ. ಹಲಾಲ್ ಏಕೆ ಕಡ್ಡಾಯವಾಗಿದೆ ಎಂದು ಅವರು ಪ್ರಶ್ನಿಸಿದರು.
ಹಿಂದೂಗಳಿಗೆ ತಿನ್ನುವ ಅಥವಾ ಖರೀದಿಯ ಸಾಂವಿಧಾನಿಕ ಸ್ವಾತಂತ್ರ್ಯ ಇಲ್ಲವೇನು?, ಹಾಗಾಗಿ ಹಿಂದೂ ಸಮಾಜವು ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಖರೀದಿಸದೆ ಈ ಬಾರಿಯ ದೀಪಾವಳಿಯನ್ನು ಹಿಂದೂ ಪದ್ಧತಿಯಿಂದ ಹಲಾಲ್ ಮುಕ್ತ ದೀಪಾವಳಿ ಎಂದು ಆಚರಿಸಬೇಕು ಎಂದು ಕರೆ ನೀಡಿದರು.
ಮುಸ್ಲಿಂರಿಗೆ ನೀಡುತ್ತಿರುವ ಮೀಸಲಾತಿಯನ್ನು ಕಡಿತಗೊಳಿಸಬೇಕು ಎಂದು ಅರವಿಂದ ಬೆಲ್ಲದ್ ಹಾಗೂ ಬಸನಗೌಡ ಪಾಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಸರ್ಕಾರ ಮುಸ್ಲಿಂ ಮೀಸಲಾತಿ ನಿಲ್ಲಿಸುವುದರಲ್ಲಿ ತಪ್ಪಿಲ್ಲ ಎಂದರು.
ಇದನ್ನೂ ಓದಿ: ಇಸ್ಲಾಂ ಕಡೆಯಿಂದಲೇ ಮತಾಂತರ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆದಿತ್ತು: ಪ್ರಮೋದ್ ಮುತಾಲಿಕ್