ಧಾರವಾಡ: ರಾಷ್ಟ್ರಪಿತ ಗಾಂಧೀಜಿ ಅವರು ಜನಿಸಿ ಸುಮಾರು 150 ವರ್ಷಗಳು ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅವರ ನೆನಪಿಗಾಗಿ ಬೆಳಗಾವಿ ವಿಭಾಗ ಮಟ್ಟದ 80 ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು 5 ದಿನಗಳ ಕಾಲ ಚಿತ್ರಕಲಾ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು.
ಜಿಲ್ಲೆಯ ಸರ್ಕಾರಿ ಚಿತ್ರಕಲಾ ವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ವಲಯದ ಆಯುಕ್ತರ ಕಚೇರಿಯ ವತಿಯಿಂದ 'ಗಾಂಧೀಜಿ-150 ಕುಂಚ ನಮನ' ಶೀರ್ಷಿಕೆಯಡಿ ನಾಲ್ಕು ದಿನಗಳ ಕಾಲ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರದಲ್ಲಿ ಶಿಕ್ಷಕರ ಕುಂಚದಿಂದ ಅರಳಿದ ಮಹಾತ್ಮ ಗಾಂಧೀಜಿಯವರ ವಿಭಿನ್ನ ರೀತಿಯ ಕಲಾಕೃತಿಗಳು ನೋಡುಗರನ್ನು ಆಕರ್ಷಿಸಿದವು. ಗಾಂಧೀಜಿ ನಡೆದು ಬಂದ ಹಾದಿ, ಅಧಿವೇಶನ ಆರಂಭವಾಗುವುದಕ್ಕೂ ಒಂದು ವಾರ ಮೊದಲು ಗಾಂಧೀಜಿ ಅವರು ಬೆಳಗಾವಿಗೆ ಆಗಮಿಸಿದ್ದರು. ಈ ಸಮಯದಲ್ಲಿ ಅಕ್ಕಪಕ್ಕದ ಗ್ರಾಮಗಳಿಗೆ ಗಾಂಧಿ ಭೇಟಿ ನೀಡಿದ್ದರು. ಅಲ್ಲಿನ ಸ್ಥಳೀಯರ ಜೊತೆ ಮಾತನಾಡಿದ್ದರು ಎನ್ನಲಾದ ಚಿತ್ರಗಳು ಗಮನ ಸೆಳೆದವು.
ಗಾಂಧೀಜಿ ಪ್ರತಿಮೆ, ಚರಕ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಮಗುವಾಗಿ ಗಾಂಧಿ ಹೋರಾಟಗಾರರೊಂದಿಗೆ ಗಾಂಧೀಜಿ ಅವರ ಮುಂದಾಳತ್ವ, ಬಾಲಕ ಗಾಂಧಿ, ದೇಶಿ ಉಡುಪಿನ ಗಾಂಧಿ, ಭಾರತೀಯ ಸೈನ್ಯ ಶುಶ್ರೂಷಕ ಗಾಂಧಿ, ಪದಕದಲ್ಲಿ ಗಾಂಧಿ, ಬರವಣಿಗೆ ನಿರತ ಗಾಂಧಿ, ಅನಂತ ನಡಿಗೆ ಗಾಂಧಿ ಮುಂತಾದ ವಿಚಾರ ಧಾರೆಗಳನ್ನು ಶಿಕ್ಷಕರು ತಮ್ಮ ಕಲಾಕೃತಿ ಮೂಲಕ ಪ್ರದರ್ಶಿಸಿದರು.