ಹುಬ್ಬಳ್ಳಿ: ಸಂಗೀತಕ್ಕೂ ಹಾಗೂ ಮಾನವನಿಗೂ ಒಂದು ಅವಿನಾಭಾವ ಸಂಬಂಧವಿದೆ. ಈ ಕುಟುಂಬವೊಂದು ಸುಮಾರು ಮೂರು ತಲೆಮಾರಿನಿಂದ ಸಂಗೀತದ ಸಾಧನಗಳನ್ನು ತಯಾರಿಸುವುದನ್ನೇ ಕಾಯಕ ಮಾಡಿಕೊಂಡಿದೆ. ಹಗಲು ರಾತ್ರಿ ಎನ್ನದೇ ಸಂಗೀತದ ವಾದ್ಯಗಳನ್ನು ತಯಾರಿಸುವಲ್ಲಿ ನಿರತವಾಗಿದೆ.
ಹೀಗೆ ವಾದ್ಯಗಳನ್ನು ತಯಾರಿಸುತ್ತಿರುವವರ ಹೆಸರು ಚಂದ್ರಕಾಂತ ಮಹಾಂತ್. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ನಿವಾಸಿ. ಮಹಾಂತ ಅವರ ಕುಟುಂಬಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ತಲೆ ತಲೆಮಾರಿನಿಂದಲೂ ಸಂಗೀತಗಾರರಾಗಿ ಅಲ್ಲದೆ ವಾದ್ಯ ವೈದ್ಯರಾಗಿ ಕಾಯಕವನ್ನು ಮುಂದುವರಿಸಿದ್ದಾರೆ. ಪಂ. ಪುಟ್ಟರಾಜ ಗವಾಯಿಗಳ ಪ್ರೇರಣೆಯಿಂದ ಹಾಗೂ ಅವರ ಆಶೀರ್ವಾದ ಪಡೆದ ಈ ಕುಟುಂಬ ಸಂಗೀತ ವಾದ್ಯಗಳ ತಯಾರಿಕೆಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಈ ಉದ್ಯೋಗದಲ್ಲಿ ತೊಡಗಿ ಅದರಲ್ಲೇ ಜೀವನ ಕಟ್ಟಿಕೊಂಡಿದ್ದಾರೆ.
ರಾಜ್ಯದ ಹಲವಾರು ಜಿಲ್ಲೆಗಳಿಂದ ಇವರ ಬಳಿ ವಾದ್ಯಗಳನ್ನು ಖರೀದಿಸಲು ಸಂಗೀತ ಪ್ರಿಯರು ಆಗಮಿಸುತ್ತಾರೆ. ವಿಶೇಷವಾಗಿ ಕಲಬುರಗಿ, ರಾಯಚೂರು, ಹಂಪಿ ಮತ್ತು ಧಾರವಾಡ ವಿಶ್ವ ವಿದ್ಯಾಲಯ, ಧಾರವಾಡ ಆಕಾಶವಾಣಿ, ಕಾರವಾರ, ಹಾವೇರಿ, ಗದಗ ದಿಂದ ಸಂಗೀತ ವಾದ್ಯಗಳ ಖರೀದಿಗಾಗಿ ಗ್ರಾಹಕರು ಆಗಮಿಸುತ್ತಾರೆ.
ಹುಬ್ಬಳ್ಳಿ-ಧಾರವಾಡದ ಕಲಾವಿದರು ಇವರ ವಾದ್ಯಗಳಿಂದಲೇ ಸಂಗೀತ ತಜ್ಞರಾಗಿರುವ ಉದಾಹರಣೆಗಳಿವೆ. ಹಾರ್ಮೋನಿಯಂ, ತಬಲಾ, ಸ್ವರ ಮಂಡಲ ಬಹಳ ಬೇಡಿಕೆಯನ್ನು ಹೊಂದಿದೆ. ಶ್ರಾವಣ ಮಾಸದಲ್ಲಿ ವಾದ್ಯಗಳಿಗೆ ಭಾರೀ ಬೇಡಿಕೆಯನ್ನು ಹೊಂದಿದ್ದು, ದೀಪಾವಳಿ, ದಸರಾದಲ್ಲಿ ಸಂಗೀತ ವಾದ್ಯಗಳನ್ನು ಜನರು ಖರೀದಿ ಮಾಡುತ್ತಾರೆ. ಆದರೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸ್ವಲ್ಪ ಪ್ರಮಾಣದಲ್ಲಿ ವ್ಯಾಪಾರ ಕುಗ್ಗಿದರೂ ಕೂಡ, ವಾದ್ಯಗಳ ಬೇಡಿಕೆ ಕಡಿಮೆಯಾಗಿಲ್ಲ ಎನ್ನುವುದೇ ವಿಶೇಷ.
ಒಟ್ಟಿನಲ್ಲಿ ಭಾರತದಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನಮಾನವಿದ್ದು, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಂಗೀತ ವಾದ್ಯಗಳಿಗೆ ವಿಶೇಷವಾದ ಬೇಡಿಕೆ ಇದೆ. ಆದರೆ ಇತ್ತೀಚೆಗೆ ಯುವಕರು ಪಾಶ್ಚಿಮಾತ್ಯ ಸಂಗೀತಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ನಮ್ಮ ದೇಶಿಯ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ನಮ್ಮಲ್ಲಿ ಇರುವಂತಹ ಹೊಸ ಕಲೆಗಳು ಹೊರಬರುವುದರ ಜೊತೆಗೆ ಜೀವನ ಕಟ್ಟಿಕೊಂಡಿರುವುದು ವಿಶೇಷವಾಗಿದೆ.