ಧಾರವಾಡ: ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಿಸುವುದು ಹಾಗೂ ನಿರಂತರವಾಗಿ ಕಲಿಕೆಯ ಸಂಪರ್ಕದಲ್ಲಿ ಇರಿಸುವ ಉದ್ದೇಶದಿಂದ ರಾಜ್ಯಾದ್ಯಂತ ವಿದ್ಯಾಗಮ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೂ ವಿದ್ಯಾಗಮ ಸಹಕಾರಿಯಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಜಿಲ್ಲೆಯ ಸಲಕಿನಕೊಪ್ಪ ಮತ್ತು ಬಾಡ ಗ್ರಾಮಗಳಲ್ಲಿ ವಿದ್ಯಾಗಮ ಚಟುವಟಿಕೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಶಾಲೆಗಳು ಪ್ರಾರಂಭವಾಗುವುದು ಇನ್ನೂ ವಿಳಂಬವಾಗುವ ಸಾದ್ಯತೆ ಇದೆ. ಹಾಗಾಗಿ ಮಕ್ಕಳು ಶಿಕ್ಷಣ ಮತ್ತು ಪಠ್ಯದಿಂದ ದೂರವಾಗಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗೆ ಈಡಾಗುವ ಸಂಭವ ತಪ್ಪಿಸಲು ವಿದ್ಯಾಗಮ ಕಾರ್ಯಕ್ರಮ ರೂಪಿಸಲಾಗಿದೆ. ಶಾಲೆಯಿಂದ ಮಕ್ಕಳು ಹೊರಗುಳಿದರೆ ಅವರನ್ನು ಪುನ: ಮುಖ್ಯವಾಹಿನಿಗೆ ಕರೆತರುವುದು ಕಷ್ಟವಾಗಲಿದೆ. ಸರ್ಕಾರಿ ಶಾಲೆಗಳಷ್ಟೇ ಅಲ್ಲದೇ ಖಾಸಗಿ ಶಾಲೆಗಳು ಕೂಡ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಗೊಳಿಸಬಹುದು ಅಥವಾ ಇದಕ್ಕಿಂತಲೂ ಉತ್ತಮವಾದ ಚಟುವಟಿಕೆಯೊಂದಿಗೆ ಮಕ್ಕಳ ಸಂಪರ್ಕವನ್ನು ಹೊಂದಿರಬೇಕು ಎಂದರು.
![Education Minister Suresh Kumar who made the lesson to children](https://etvbharatimages.akamaized.net/etvbharat/prod-images/kn-dwd-5-minister-av-ka10001_10092020180148_1009f_1599741108_829.jpg)
ಶಿಕ್ಷಕರ ಕಾರ್ಯಕ್ಕೆ ಸಚಿವರ ಮೆಚ್ಚುಗೆ:
ವಿದ್ಯಾಗಮ ಯಶಸ್ವಿಗೆ ಈ ವಿಭಾಗದ ಶಿಕ್ಷಕರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಸರದಿ ಆಧಾರದಲ್ಲಿ ಎಲ್ಲ ಪ್ರದೇಶಗಳಲ್ಲಿ ಶಿಕ್ಷಕರು ತೆರಳಿ ಪಠ್ಯದ ಕುರಿತು ಮಕ್ಕಳಲ್ಲಿರುವ ಸಂದೇಹಗಳನ್ನು ನಿವಾರಿಸುತ್ತಿದ್ದಾರೆ. ಇದು ಶಾಲೆಯ ಬಗ್ಗೆ ಮಕ್ಕಳ ಆಸಕ್ತಿಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಅದೇ ರೀತಿ ಇತ್ತೀಚಿಗೆ ಜರುಗಿದ ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಈ ಭಾಗದ ಶಿಕ್ಷಕರು ತಮ್ಮ ಮೋಟಾರ್ ಬೈಕ್ಗಳ ಮೂಲಕ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಮಾರ್ಗದರ್ಶನ ಮಾಡಿದ್ದು ಪ್ರಶಂಸನೀಯವಾಗಿದೆ. ಇಂತಹ ಪ್ರಯತ್ನಗಳಿಂದ ಅನೇಕ ದುರ್ಬಲ ಮತ್ತು ಅನಾರೋಗ್ಯ ಪೀಡಿತ ಮಕ್ಕಳು, ಕೂಲಿಕಾರರು ಹಾಗೂ ಕಾರ್ಮಿಕರ ಮಕ್ಕಳು ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿದೆ ಎಂದು ಸಚಿವರು ತೃಪ್ತಿವ್ಯಕ್ತಪಡಿಸಿದರು.
![Education Minister Suresh Kumar who made the lesson to children](https://etvbharatimages.akamaized.net/etvbharat/prod-images/kn-dwd-5-minister-av-ka10001_10092020180148_1009f_1599741108_448.jpg)
ಕೊರೊನಾ ಶುಲ್ಕ ಸಂಗ್ರಹಿಸಿದರೆ ಕ್ರಮ:
ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಕೊರೊನಾ ಹೆಸರಿನಲ್ಲಿ ಶುಲ್ಕ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ಅಂತಹ ಯಾವುದೇ ಶುಲ್ಕ ವಿಧಿಸಲು ಅವಕಾಶವಿಲ್ಲ. ನಿಯಮಬಾಹಿರವಾಗಿ ಯಾವುದಾದರೂ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.
![Education Minister Suresh Kumar who made the lesson to children](https://etvbharatimages.akamaized.net/etvbharat/prod-images/kn-dwd-5-minister-av-ka10001_10092020180148_1009f_1599741108_753.jpg)
ಪಾಠ ಮಾಡಿದ ಶಿಕ್ಷಣ ಸಚಿವರು:
ವಿದ್ಯಾಗಮ ಕಾರ್ಯಕ್ರಮದ ಪರಿಶೀಲನೆಗಾಗಿ ಇಂದು ಧಾರವಾಡ ಗ್ರಾಮೀಣ ವಿಭಾಗದ ಸಲಕಿನಕೊಪ್ಪ ಹಾಗೂ ಬಾಡ ಗ್ರಾಮಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವರು, ಮಕ್ಕಳಿಂದ ನಾಡಗೀತೆ ಹಾಡಿಸಿ ಪಾಠ, ಮಗ್ಗಿ ಹೇಳಿಸಿ ಮಕ್ಕಳ ಶಿಕ್ಷಣಮಟ್ಟ ಪರೀಕ್ಷಿಸಿದರು.
ಸಲಕಿನಕೊಪ್ಪ ಗ್ರಾಮದಲ್ಲಿ ವಿದ್ಯಾಗಮ ಪಾಠದಲ್ಲಿ ನಿರತರಾಗಿರುವ ಮಕ್ಕಳಿಗೆ ಹಲವು ಪ್ರಶ್ನೆಗಳನ್ನು ಕೇಳುವ ಜೊತೆಗೆ ಮಗ್ಗಿಯನ್ನು ಕ್ರಮವಾಗಿ ಹಾಗೂ ವಿರುದ್ಧವಾಗಿ ಹೇಳಿಸಿದರು. ಮಕ್ಕಳ ಕೈಬರಹ ಕಂಡು ಸಂತಸಪಟ್ಟರು. ಕೊರೊನಾ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಮಕ್ಕಳಿಂದ ವಿವರಿಸಲು ಹೇಳಿದರು. ಇದೇ ವೇಳೆ ಶಾಲೆ ಪುನರಾರಂಭದ ಕುರಿತು ಮಕ್ಕಳ ಅಭಿಪ್ರಾಯ ಆಲಿಸಿದರು
ಇನ್ನು ಬಾಡ ಗ್ರಾಮದಲ್ಲಿ ಮಕ್ಕಳಿಂದ ನಾಡಗೀತೆ ಹಾಡಿಸಿದ ಸಚಿವರು, ನಾಡಗೀತೆಯ ರಚನೆಕಾರರು, ರಾಷ್ಟ್ರಗೀತೆಯ ಕರ್ತೃ, ಅವರಿಗೆ ದೊರೆತ ಪ್ರಶಸ್ತಿಗಳು, ಭಾರತದ ಈಗಿನ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆಗಳನ್ನು ಕೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಉಪನಿರ್ದೇಶಕ ಮೋಹನಕುಮಾರ್ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬೊಮ್ಮಕ್ಕನವರ, ಶಿಕ್ಷಕರಾದ ಪಿ.ಎಂ. ಪಾಟೀಲ, ಜಿ.ಎಂ. ಕೋಟಿಗೌಡರ, ಜಿನ್ನಿ ತರಗಲ್ ಇದ್ದರು.