ಧಾರವಾಡ: ಎಲ್ಲಾ ಅಧಿಕಾರಿಗಳು ಬರ ನಿರ್ವಹಣೆಗೆ ಅಗತ್ಯ ಕ್ರಮ ತೆಗೆದುಕೊಂಡು, ಯಾವುದೇ ಗ್ರಾಮ ಅಥವಾ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ತಕ್ಷಣ ಸ್ಪಂದಿಸಿ 24 ಗಂಟೆಯಲ್ಲಿ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬರ ನಿರ್ವಹಣೆ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ನೀರಿನ ಮೂಲಗಳ ಕೊರತೆಯಿದ್ದಲ್ಲಿ ಖಾಸಗಿ ಬೋರ್ವೆಲ್ ನೀರು ಪಡೆಯುವ ಮೂಲಕ ಸಮಸ್ಯೆ ಪರಿಹರಿಸಿ. ಗ್ರಾಮ ಮಟ್ಟದ ಅಧಿಕಾರಿಗಳು ನೀಡುವ ವರದಿಯನ್ನು ಇಓ ಮತ್ತು ತಹಸೀಲ್ದಾರರು ಪರಿಶೀಲಿಸಿ ಕಾಲಕಾಲಕ್ಕೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ಮಾಡಬೇಕು. ಪ್ರತಿಯೊಂದರಲ್ಲೂ ಪಾರದರ್ಶಕತೆ ಇರಲಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯವಿರುವ ಜನರಿಗೆ ಸ್ಥಾನಿಕವಾಗಿ ಉದ್ಯೋಗ ನೀಡಿ, ಯಾವುದೇ ಕುಟುಂಬ ಉದ್ಯೋಗ ಅರಸಿ ಬೇರೆ ಕಡೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ತಿಳಿಸಿದರು.
ಗೋಶಾಲೆಗಳ ಮೂಲಕ ಅಗತ್ಯವಿರುವ ಕಡೆ ದನಕರುಗಳಿಗೆ ಮೇವು ನೀಡಿ, ಮೇವು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು, ಅಗತ್ಯವಿರುವ ಭಾಗದಲ್ಲಿ ಸರಬರಾಜು ಮಾಡಿ ಮತ್ತು ಸರಿಯಾದ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು.
ಕುಡಿಯುವ ನೀರು, ಉದ್ಯೋಗ ಹಾಗೂ ದನಕರುಗಳಿಗೆ ಮೇವು ಸೇರಿದಂತೆ ಬರ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆ, ಅಹವಾಲುಗಳಿದ್ದಲ್ಲಿ ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಚಿತ ಸಹಾಯವಾಣಿ ಸಂಖ್ಯೆ: 1077 ಗೆ ಕರೆ ಮಾಡಿ ಸಾರ್ವಜನಿಕರು ತಿಳಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.