ದಾವಣಗೆರೆ: ಸಾರ್ವಜನಿಕರು ದೂರು ಮತ್ತು ಅಹವಾಲುಗಳನ್ನು ನೀಡುವುದು ಕರ್ತವ್ಯ. ಅದರಂತೆ ಚುನಾವಣೆಗಳಲ್ಲಿ ಮತದಾನ ಮಾಡಬೇಕಿರುವುದು ನಾಗರಿಕರಾದ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವೆಂದು ದೂರು ನೀಡಲು ಬಂದಿದ್ದ ಮಹಿಳಾ ವಕೀಲರೊಬ್ಬರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಲಹೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನದಲ್ಲಿ ಜನರ ಅವಹಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ದೂರು ನೀಡಲು ಆಗಮಿಸಿದ್ದ ಮಹಿಳಾ ವಕೀಲರೊಬ್ಬರಿಗೆ ನೀವು ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ್ದೀರಾ ಎಂದಾಗ, ಆ ಮಹಿಳೆ ಇಲ್ಲ ಎಂದು ಹೇಳಿದರು. ಇದಕ್ಕೆ ಜಿಲ್ಲಾಧಿಕಾರಿಗಳು ನಾಗರಿಕರಾಗಿ ಮತದಾನ ಮಾಡಬೇಕಿರುವುದು ನಮ್ಮ ಮುಖ್ಯ ಕರ್ತವ್ಯ, ಮತದಾನ ನಮ್ಮ ಹಕ್ಕು ಅದನ್ನು ಬಳಸಬೇಕಿರುವುದು ನಮ್ಮ ಜವಾಬ್ದಾರಿ, ಮೂಲಭೂತ ಸೌಕರ್ಯ ಬೇಕು ಎಂದು ಕೇಳುತ್ತೀರಿ. ಆದರೆ, ನಿಮ್ಮ ಕರ್ತವ್ಯವಾದ ಮತದಾನ ಪ್ರಕ್ರಿಯೆಯಲ್ಲಿ ನೀವು ತೊಡಗಿರುವುದಿಲ್ಲ, ಆದ್ದರಿಂದ ತಪ್ಪದೇ ನಿಮ್ಮ ಜವಾಬ್ದಾರಿ ಚಲಾಯಿಸಿ ಎಂದು ಮಹಿಳೆಗೆ ಡಿಸಿ ಸಲಹೆ ನೀಡಿದರು.
ಸಭೆಯಲ್ಲಿ ವೃದ್ದಾಪ್ಯ ವೇತನ, ವಿಧವಾ ವೇತನ, ಖಾತೆ ವರ್ಗಾವಣೆ, ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು, ಸಾಲ ಸೌಲಭ್ಯಗಳ ಹಾಗೂ ಅಂಗವಿಕಲರಿಗೆ ಸ್ವಉದ್ಯೋಗಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅನೇಕ ಅಹವಾಲುಗಳನ್ನು ಸ್ವೀಕರಿಸಲಾಯಿತು.