ದಾವಣಗೆರೆ: ಮುಂದಿನ ಸಿಎಂ ವಿಚಾರವಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಪದೇ ಪದೇ ಸಿದ್ದರಾಮಯ್ಯ ಹೆಸರು ಹೇಳುತ್ತಿದ್ದಾರೆ. ಈ ವಿಚಾರವಾಗಿ ಸ್ವಪಕ್ಷೀಯರಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದೀಗ ತನಗೆ ಎಐಸಿಸಿಯಿಂದ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇದುವರೆಗೂ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ಸದ್ಯ ಪ್ರವಾಸದಲ್ಲಿದ್ದೇನೆ" ಎಂದು ಹೇಳಿದರು.
ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಲ್ಪಸಂಖ್ಯಾತರ ಪೂರ್ವಭಾವಿ ಸಭೆಗೆ ತೆರಳುವ ಮುನ್ನ ಮಾತನಾಡಿದ ಅವರು, "ನೋಟಿಸ್ ನನ್ನ ಕೈಗೆ ಬಂದಿಲ್ಲ. ಕೇವಲ ಮಾಧ್ಯಮದಲ್ಲಿ ಮಾತ್ರ ನೋಟಿಸ್ ನೋಡಿದ್ದೇನೆ ಅಷ್ಟೇ. ಇಂದು ದಾವಣಗೆರೆ, ಚಿತ್ರದುರ್ಗದ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ ನಂತರ ನೋಟಿಸ್ ವಿಚಾರ ತಿಳಿಸುವೆ" ಎಂದರು.
ಡಿಕೆಶಿ ಕುರಿತು ಕೇಳಿದ ಪ್ರಶ್ನೆಗೆ, "ಕೆಪಿಸಿಸಿ ಅಧ್ಯಕ್ಷರು ದೊಡ್ಡವರು. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ" ಎಂದಷ್ಟೇ ಹೇಳಿದರು. ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯಿಸುತ್ತಾ, "ವಿಚಾರಣೆಗೆ ಇವತ್ತು ಕೊನೆ ದಿನವಿದ್ದ ಕಾರಣ ಎಸಿಬಿ ಅಧಿಕಾರಿಗಳಿಗೆ ಕಾಲಾವಕಾಶ ಕೇಳಿದ್ದೇನೆ" ಎಂದು ತಿಳಿಸಿದರು.
2023 ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಿದ ಜಮೀರ್, "ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಹೆಚ್ಚು ಟಿಕೆಟ್ ನೀಡುತ್ತಿದೆ. ಜೆಡಿಎಸ್ನಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಮಣೆ ಹಾಕಲಾಗುತ್ತಿದೆ. ಜೆಡಿಎಸ್ ಬಿಜೆಪಿ ಬಿ ಟೀಂ" ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: "ಬಿಜೆಪಿ ಮಿತ್ರರೊಂದಿಗೆ ಮಾತನಾಡಿದ ಬಳಿಕ ನನ್ನ ಫೋನ್ಗೆ ಕರೆ ಬರುತ್ತಿಲ್ಲ, ಕರೆ ಮಾಡಲು ಸಾಧ್ಯವಾಗುತ್ತಿಲ್ಲ"