ದಾವಣಗೆರೆ: ಜಿನ್ನಾ ದೇಶ ವಿಭಜನೆ ಮಾಡಿರುವುದಕ್ಕಿಂತಲೂ ಅಡ್ವಾಣಿಯವರನ್ನು ಸಂಘ ಪರಿವಾರ ದೂರ ತಳ್ಳಿರುವುದು ಘೋರವಾದದ್ದು ಎಂದು ರಾಜ್ಯಸಭಾ ಮಾಜಿ ಸದಸ್ಯ ಹನುಮಂತಯ್ಯ ಹೇಳಿದ್ದಾರೆ.
ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ಹಮ್ಮಿಕೊಂಡಿದ್ದ 'ಜಿನ್ನಾ ಕೋಮುವಾದಿಯೇ' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಡ್ವಾಣಿಯರು ಕೊನೆಯವರೆಗೂ ಮೊಹಮ್ಮದ್ ಅಲಿ ಜಿನ್ನಾರನ್ನು ಜಾತ್ಯಾತೀತ ನಾಯಕ ಎಂದು ಹೇಳಿದ್ದರು. ಜಿನ್ನಾರ ಬಗ್ಗೆ ಅಡ್ವಾಣಿಯವರು ಜಾತ್ಯಾತೀತ ನಾಯಕ ಎಂದು ಹೇಳಲು ಹಿಂದೆ ಬೀಳಲಿಲ್ಲ. ಅತಂಹ ಸತ್ಯ ಪ್ರತಿಪಾದಕ ಅಡ್ವಾಣಿಯವರನ್ನು ಆರ್ಎಸ್ಎಸ್ ಹಾಗೂ ಸಂಘ ಪರಿವಾರದವರು ಮೂಲೆಗೆ ತಳ್ಳುವ ಕೆಲಸ ಮಾಡಿದರಲ್ಲ ಅದು ಘೋರವಾದದ್ದು. ಚರಿತ್ರೆಯನ್ನು ಅರ್ಥ ಮಾಡಿಕೊಳ್ಳುವ ಕ್ರಮ ಸತ್ಯ ನಿಷ್ಠೆಯಾಗಿರಬೇಕೆ ಹೊರತು ಪೂರ್ವಾಗ್ರಹ ಪೀಡಿತವಾಗಿರಬಾರದು ಎಂಬುವುದು ಜಿನ್ನಾ ಕೋಮುವಾದಿಯೇ ಎಂಬ ಪುಸ್ತಕದ ಸಂದೇಶವಾಗಿದೆ. ಅದ್ದರಿಂದ ಈ ಪುಸ್ತಕವನ್ನು ಹೆಚ್ಚು ಯುವಕರಿಗೆ ತಲುಪಿಸಬೇಕಾಗಿದೆ ಎಂದರು.
ಇದನ್ನೂ ಓದಿ : ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾದ ಗ್ರಾ. ಪಂ. ಸದಸ್ಯರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ
ಪುಸ್ತಕದ ಲೇಖಕ ಬಿ.ಎಂ.ಹನೀಫ್ ಮಾತನಾಡಿ, ಇಂದಿನ ಸಮಾಜದಲ್ಲಿ ಇತಿಹಾಸವನ್ನು ಹೇಳಿಕೊಡಬೇಕಾಗಿದೆ. ಅದರೆ ಇತಿಹಾಸವನ್ನು ರಾಜಕಾರಣಿಗಳು ಹೇಳುತ್ತಿರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾವ್ಯಾವ ಕಾಲಘಟ್ಟದಲ್ಲಿ ಏನೇನು ಆಯಿತು ಎಂಬುವುದನ್ನು ಆಯಾಯ ಕಾಲಘಟ್ಟದ ಲೇಖಕರು ದಾಖಲೆ ಮಾಡುತ್ತಾ ಬಂದಿದ್ದಾರೆ. ಎಲ್.ಕೆ.ಅಡ್ವಾಣಿಯವರು ಜಿನ್ನಾ ಜಾತ್ಯಾತೀತವಾದಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ಕೆಲವರು ಜಿನ್ನಾ ಕೋಮುವಾದಿ ಎಂದು ಹೇಳುತ್ತಾರೆ. ಈ ದೃಷ್ಟಿಕೋನ ಇಟ್ಟುಕೊಂಡು ಈ ಪುಸ್ತಕವನ್ನು ಬರೆದಿದ್ದೇನೆ. ಜಿನ್ನಾರ ಬಗ್ಗೆ ಗೊತ್ತಿರದ ಸಾಕಷ್ಟು ಮಾಹಿತಿಗಳು ಹಾಗೂ ತಪ್ಪು ತಿಳುವಳಿಕೆಗಳಿಗೆ ಪುಸ್ತಕದಲ್ಲಿ ಉತ್ತರ ಇದೆ ಎಂದು ಹೇಳಿದರು.