ಹರಿಹರ: ಅನಿರೀಕ್ಷಿತವಾಗಿ ಎದುರಾಗುವ ವಿಪತ್ತುಗಳನ್ನು ಎದುರಿಸಲು ಸಾರ್ವಜನಿಕರು ಯಾವ ರೀತಿ ಸನ್ನದ್ಧರಾಗಬೇಕು ಎಂದು ಗ್ರಾಮಾಂತರ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಹೇಳಿದರು.
ನಗರ ಪೊಲೀಸ್ ಠಾಣೆ ಆವರಣದಲ್ಲಿ ವಿಪತ್ತು ನಿರ್ವಹಣೆ ಕಾರ್ಯದಲ್ಲಿ ಬಳಸಬೇಕಾದ ರಕ್ಷಣಾ ಕವಚಗಳನ್ನು ಮುಂಜಾಗ್ರತಾ ಕ್ರಮವಾಗಿ ಸಿದ್ದವಾಗಿಸಿಟ್ಟುಕೊಳ್ಳಲು ಆಗಮಿಸಿದ್ದ ವೇಳೆ ಅವರು ಮಾತನಾಡಿದರು.
ಪ್ರವಾಹ ಭೀತಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮೊದಲೇ ರಕ್ಷಣಾ ಸಾಮಗ್ರಿಗಳನ್ನು ಸಿದ್ಧಗೊಳಿಸುವುದಕ್ಕೆ ಮುಂದಾಗಿದ್ದೇವೆ. ವಿಪತ್ತು ಸಂಭವಿಸಿದ ನಂತರ ಏನು ಮಾಡಬೇಕೆಂದು ಯೋಚಿಸುವುದಕ್ಕಿಂತ ವಿಪತ್ತು ನಡೆಯುವ ಮೊದಲೇ ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಮಾರ್ಗದರ್ಶನ ನೀಡಿದರು.
ನಂತರ ವಿಪತ್ತು ಕಾರ್ಯ ನಿರ್ವಹಣೆ ಅಡಿ ಬಳಸಬೇಕಾದ ರಕ್ಷಣಾ ಸಾಮಗ್ರಿಗಳನ್ನು ತೆಗೆದುಕೊಂಡು ಪ್ರವಾಹ ಭೀತಿ ಎದುರಿಸುವ ಸ್ಥಳಗಳಾದ ರಾಜನಹಳ್ಳಿ, ಹಲಸಬಾಳು, ಹರಿಹರ, ದೀಟೂರು ಪಾಮೇನಹಳ್ಳಿ, ಸಾರಥಿ, ಚಿಕ್ಕಬಿದರಿ ಹಾಗೂ ಇತರ ಗ್ರಾಮಗಳಿಗೆ ತೆರಳಿ ಸ್ಥಳಗಳನ್ನು ಪರಿಶೀಲನೆ ನಡೆಸಿ ನದಿಯಲ್ಲಿ ಬೋಟಿಂಗ್ ಮಾಡಿದರು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕರಾದ ಶಿವಪ್ರಸಾದ್ ಎಂ, ಗ್ರಾಮಾಂತರ ಠಾಣೆಯ ಪಿಎಸ್ಐ ಡಿ ರವಿಕುಮಾರ್, ನಗರ ಠಾಣೆ ಪಿಎಸ್ಐ ಶೈಲಶ್ರೀ, ಮಲೆಬೆನ್ನೂರು ಠಾಣೆ ಪಿಎಸ್ಐ ವೀರಭದ್ರಪ್ಪ, ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ಈಜು ಪಟುಗಳು ಹಾಜರಿದ್ದರು.