ಮಂಗಳೂರು : ಪ್ರತಿ ತಿಂಗಳು ನಡೆಯಬೇಕಾಗಿದ್ದ ರಾಜ್ಯ ಧಾರ್ಮಿಕ ಪರಿಷತ್ನ ಸಭೆಯು ಕಳೆದ ಏಳು ತಿಂಗಳಿನಿಂದ ನಡೆದಿಲ್ಲ. ಇದರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮಸ್ಯೆಗಳು ಪರಿಹಾರವಾಗಿಲ್ಲ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಆರೋಪಿಸಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಲವು ಸಮಸ್ಯೆಗಳು, ವಿವಾದಗಳು ನೆನಗುದಿಗೆ ಬಿದ್ದಿವೆ. ಇದಕ್ಕೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರೇ ನೇರ ಹೊಣೆ ಎಂದು ಆರೋಪಿಸಲಾಗಿದೆ.
ರಾಜ್ಯ ಧಾರ್ಮಿಕ ಪರಿಷತ್, ಹಿಂದೂ ಧಾರ್ಮಿಕ ಸಂಸ್ಥೆಗಳು, ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ರಚನೆ, ಪೂಜೆ, ಧಾರ್ಮಿಕ ಆಚರಣೆಗಳ ಬಗ್ಗೆ ಇನ್ನಿತರ ಸಮಸ್ಯೆಗಳು, ದೂರುಗಳ ಕುರಿತು ಸೂಕ್ತವಾದ ಕ್ರಮಕೈಗೊಳ್ಳಬೇಕಾಗುತ್ತದೆ. ಮುಜರಾಯಿ ಸಚಿವರು ರಾಜ್ಯ ಧಾರ್ಮಿಕ ಪರಿಷತ್ನ ಅಧ್ಯಕ್ಷರಾಗಿದ್ದಾರೆ. ಆದರೆ, ಡಿಸೆಂಬರ್ ಬಳಿಕ ಈ ವಿಷಯದ ಕುರಿತು ಶಶಿಕಲಾ ಜೊಲ್ಲೆಯವರು ಈವರೆಗೆ ಯಾವುದೇ ಸಭೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಲವು ಸಂಪ್ರದಾಯಗಳು ಉಲ್ಲಂಘನೆಯಾಗಿವೆ. ಶೈವಾಂಶ ದೇವಸ್ಥಾನವಾದ ಇಲ್ಲಿ ವೈಖಾನಸ ಆಗಮದಲ್ಲಿ ಪೂಜೆಯಾಗಬೇಕಿದೆ. ಆದರೆ, ಇಲ್ಲಿ ತಂತ್ರಾಗಮಸಾರದಲ್ಲಿ ಪೂಜೆ ಮಾಡಲಾಗುತ್ತಿದೆ. ದೇವಸ್ಥಾನದ ಪರಿವಾರ ದೇವರುಗಳಿಗೆ ನಿತ್ಯ ಮೂರು ಹೊತ್ತು ಪೂಜೆ, ನೈವೇದ್ಯ ಮಾಡುತ್ತಿಲ್ಲ. ಗರ್ಭಗುಡಿಯೊಳಗಿನ ಮೂಲ ಮಹಾಗಣಪತಿಗೆ ಯಾವುದೇ ಪೂಜೆಯನ್ನು ನಡೆಸಲಾಗುತ್ತಿಲ್ಲ. ಈ ಮೂಲಕ ದೇವಸ್ಥಾನದ ಸಂಪ್ರದಾಯವನ್ನು ಪಾಲಿಸದ ಅರ್ಚಕರ ಅಮಾನತು ಆಗಬೇಕು ಎಂದು ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಏಕಾದಶಿ ದಿನ ಶ್ರೀ ಸುಬ್ರಹ್ಮಣ್ಯ ದೇವರಿಗೆ ಅನ್ನ ನೈವೇದ್ಯವಾದರೂ, ಭಕ್ತಾದಿಗಳಿಗೆ ಅನ್ನಸಂತರ್ಪಣೆಯಾಗುತ್ತಿಲ್ಲ. ಶೈವ ದೇವಸ್ಥಾನದಲ್ಲಿ ವೈಷ್ಣವ ಪರಂಪರೆಯ ಏಕಾದಶಿ ಉಪವಾಸ ಅಗತ್ಯವಿಲ್ಲ. ಅಲ್ಲದೆ ಧಾರ್ಮಿಕ ಪರಿಷತ್ ಸದಸ್ಯರನ್ನು ಹೀನಾಯವಾಗಿ ನಿಂದಿಸಿರುವ ಅರ್ಚಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ದೇವಾಲಯದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಧಾರ್ಮಿಕ ಪರಿಷತ್ ಸಭೆ ನಡೆಸದೆ ಮುಜರಾಯಿ ಸಚಿವರು ಮೌನವಿದ್ದಾರೆ. ತಕ್ಷಣ ಅವರು ಸಭೆ ಕರೆದು ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ಇದನ್ನೂ ಓದಿ: ತಿರುಪತಿ ಬೆಟ್ಟದಲ್ಲಿ ಬೀಡುಬಿಟ್ಟ ಆನೆಗಳ ಹಿಂಡು.. ಬೆಚ್ಚಿಬಿದ್ದ ಭಕ್ತ ಸಮೂಹ