ಮಂಗಳೂರು: ಮಹಾನಗರಗಳಲ್ಲಿ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಆದ್ರೆ ಅದೇ ರೀತಿಯ ಆದ್ಯತೆ ಒಳ ರಸ್ತೆಗಳಿಗೆ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಲೇ ಇರುತ್ತದೆ. ಮಂಗಳೂರು ಮಹಾನಗರದಲ್ಲಿಯೂ ಮುಖ್ಯ ರಸ್ತೆಗಳಿಗೆ ನೀಡುವ ಆದ್ಯತೆ ಒಳ ರಸ್ತೆಗಳಿಗೂ ನೀಡಬೇಕು ಎಂಬುದು ಜನರ ಬೇಡಿಕೆಯಾಗಿದೆ.
ರಸ್ತೆಗಳು ಆ ಪ್ರದೇಶದಲ್ಲಿನ ಅಭಿವೃದ್ಧಿಯನ್ನು ಎತ್ತಿ ತೋರಿಸುತ್ತವೆ. ಒಂದು ವೇಳೆ ರಸ್ತೆ ಹದಗೆಟ್ಟಿದ್ದರೆ ಆ ಪ್ರದೇಶದ ಅಭಿವೃದ್ಧಿಯನ್ನು ಜನರು ಆ ರಸ್ತೆಯಿಂದಲೇ ಅಳೆಯುತ್ತಾರೆ. ಹಾಗಾಗಿ ಮುಖ್ಯರಸ್ತೆಗಳ ಅಭಿವೃದ್ಧಿ ಜತೆಗೆ ಒಳ ರಸ್ತೆಗಳ ಅಭಿವೃದ್ಧಿಯೂ ಅಷ್ಟೇ ಮುಖ್ಯ. ಸ್ಥಳೀಯ ಆಡಳಿತ ವ್ಯವಸ್ಥೆ ಒಳ ರಸ್ತೆಗಳ ಅಭಿವೃದ್ಧಿಯತ್ತ ಗಮನ ಹರಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಬಜೆಟ್ನಲ್ಲಿ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿ, ಒಳರಸ್ತೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕೆಲವು ಚುರುಕಿನ ಕಾರ್ಪೊರೇಟರ್ಗಳ ವಾರ್ಡ್ನಲ್ಲಿ ಒಳರಸ್ತೆಗಳು ಅಭಿವೃದ್ಧಿ ಕಂಡರೂ ಕೂಡ ಹಲವೆಡೆ ಒಳ ರಸ್ತೆಗಳು ಅಭಿವೃದ್ಧಿಯಾಗದೆ ಬಾಕಿಯುಳಿದಿದೆಯೆಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಮಂಗಳೂರು ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಮೂಲಕ ರಸ್ತೆ ಕಾಮಗಾರಿಗಳು ನಡೆಯುತ್ತಿದೆ. ಇವುಗಳಲ್ಲಿ ಕೆಲವೊಂದು ಒಳ ರಸ್ತೆಗಳು ಸಹ ಸೇರಿದೆ. ಆದರೆ ಮುಖ್ಯ ರಸ್ತೆಗಳ ಕಾಮಗಾರಿಗೆ ನೀಡಲಾಗುವ ವೇಗವನ್ನು ಒಳ ರಸ್ತೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನೀಡುತ್ತಿಲ್ಲ. ಮಂಗಳೂರು ನಗರದ ಕೆಲವೆಡೆ ಒಳ ರಸ್ತೆಗಳ ಕಾಮಗಾರಿ ಆರಂಭಗೊಂಡು ವರ್ಷಗಳಾದರೂ ಅದನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿ ಕಾಣುತ್ತಿಲ್ಲ. ಕೆಲವು ಒಳರಸ್ತೆಗಳಂತೂ ನಿರಂತರವಾಗಿ ನಿರ್ಲಕ್ಷ್ಯಕ್ಕೊಳಗಾದಂತಿದೆ ಎಂಬ ಕೂಗು ಕೇಳಿಬರುತ್ತಿದೆ.
ಈ ಸುದ್ದಿಯನ್ನೂ ಓದಿ: ಈ ಟಿವಿ ಭಾರತ ಫಲಶೃತಿ: ಅನಾಥ ಕರುಗಳ ಪಾಲಿಗೆ ಆಸರೆಯಾದ 'ಚೈತ್ರಾ ಗೋಶಾಲೆ'
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಪ್ರೇಮಾನಂದ ಶೆಟ್ಟಿ, ಒಳರಸ್ತೆಗಳ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಲಾಗಿರುವ ಬಗ್ಗೆ ಆರೋಪಗಳು ಈ ಹಿಂದಿನಿಂದಲೂ ಕೇಳಿಬರುತ್ತಿವೆ. ಅದರ ಬಗ್ಗೆ ಗಮನ ಹರಿಸಿ ರಸ್ತೆ ಮತ್ತು ಫುಟ್ ಪಾತ್ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಒಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮುಖ್ಯರಸ್ತೆಗಳ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯನ್ನೇ ಒಳರಸ್ತೆಗಳಿಗೂ ನೀಡುವ ಮೂಲಕ ತಾರತಮ್ಯ ಆರೋಪವನ್ನು ನಿವಾರಿಸಬೇಕಾಗಿದೆ.