ಕಡಬ: ತಾಲೂಕಿನ ಕುಟ್ರುಪಾಡಿ ಗ್ರಾಮದ “ಎಲ್ಯ-ಪಾನಗ” ಎಂಬಲ್ಲಿ ಪಂಚಾಯತ್ ರಸ್ತೆಯ ದುರಸ್ತಿಯ ವೇಳೆ, ರಸ್ತೆ ಚರಂಡಿ ದುರಸ್ತಿಗೆ ಅಡ್ಡಿಪಡಿಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿ, ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆವೊಡ್ಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟ್ರುಪಾಡಿ ಗ್ರಾಮ ಪಂಚಾಯತ್ಗೆ ಸಂಬಂಧಿಸಿದ ಎಲ್ಯ-ಪಾನಗ ರಸ್ತೆಯ ದುರಸ್ತಿಗೆ ಕಳೆದ ಸಾಲಿನ ಕ್ರಿಯಾ ಯೋಜನೆಯಲ್ಲಿ ಹಣ ಮೀಸಲಿಡಲಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಚರಂಡಿ ದುರಸ್ತಿಗೆ ಪಂಚಾಯತ್ ಮುಂದಾಗಿತ್ತು. ಈ ಸಮಯದಲ್ಲಿ ಸ್ಥಳದಲ್ಲಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಹಾಗೂ ಸಿಬಂದಿಗೆ ಪುತ್ತೂರು ನಿವಾಸಿಗಳಾದ ಪ್ರಸನ್ನ ಶೆಣೈ, ಅವರ ಪತ್ನಿ ಸುಮಂಗಲ ಮತ್ತು ಪಾನಗ ನಿವಾಸಿಗಳಾದ ಸತ್ಯಪಾಲ, ಪೊಡಿಯನ್ ಅವರು ರಸ್ತೆ ಹಾಗೂ ಚರಂಡಿ ದುರಸ್ತಿ ಪಡಿಸದಂತೆ ಅಡ್ಡಿಪಡಿಸಿ ಪಿಡಿಒ ಅವರ ಮೇಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪೊಲೀಸ್ ಹಾಗೂ ಮೇಲಾಧಿಕಾರಿಗಳಿಗೆ ಪಿಡಿಒ ವಿಲ್ಫ್ರೆಡ್ ರೋಡ್ರಿಗಸ್ ದೂರು ನೀಡಿದ್ದರು. ಈ ಬಗ್ಗೆ ಐಪಿಸಿ ಸೆಕ್ಷನ್ 341, 504, 353, 506. ಆರ್/ಡಬ್ಲ್ಯೂ 34 ಐಪಿಸಿ ಪ್ರಕಾರ ಈ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.