ಮಂಗಳೂರು: ಕೇಂದ್ರ ಸರ್ಕಾರದ ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೊ (ಎನ್ಸಿಐಬಿ) ಅಧಿಕಾರಿ ಸೋಗಿನಲ್ಲಿ ಬ್ಲಾಕ್ಮೇಲ್, ಹಣಸುಲಿಗೆ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಆರೋಪಿ ಸ್ಯಾಮ್ಪೀಟರ್ ವಿರುದ್ಧ ಆರು ರಾಜ್ಯಗಳಲ್ಲಿ 11 ಪ್ರಕರಣಗಳು ದಾಖಲಾಗಿರುವುದು ಸೇರಿದಂತೆ ಹಲವು ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಅಲ್ಲದೆ, ಆತನ ವಿಚಾರಣೆಗಾಗಿ ಸಿಬಿಐ ತಂಡವು ಬಂದಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಪಿ.ಎಸ್.ಹರ್ಷ ಅವರು, ಆರೋಪಿ ಟಿ.ಸ್ಯಾಮ್ಪೀಟರ್ ವಿರುದ್ಧ ಸಿಬಿಐ ಪ್ರಕರಣಗಳಿವೆ. ಆದ್ದರಿಂದ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಇಂಟರ್ಪೋಲ್ನಿಂದ ರೆಡ್ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು. ಈತನ ಬಂಧನದ ಹಿನ್ನೆಲೆಯಲ್ಲಿ ಸಿಬಿಐ ತಂಡ ಮಂಗಳೂರಿಗೆ ಬಂದಿದೆ. ಸಿಬಿಐ ಸೇರಿದಂತೆ ವಿವಿಧ ತನಿಖಾ ತಂಡಗಳು ಈತನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ ಎಂದು ತಿಳಿಸಿದರು.
ಕೇರಳ ಮೂಲದ ಸ್ಯಾಮ್ಪೀಟರ್ ವಿರುದ್ಧ ಕರ್ನಾಟಕ, ಉತ್ತರಪ್ರದೇಶ, ಛತೀಸ್ಗಡ್ ಸೇರಿದಂತೆ 6 ರಾಜ್ಯಗಳಲ್ಲಿ 14 ಪ್ರಮುಖ ಪ್ರಕರಣಗಳು ದಾಖಲಾಗಿದೆ. ಆರೋಪಿ ಮುಖಚಹರೆ, ಆಯಾ ಪ್ರದೇಶಕ್ಕೆ ತಕ್ಕಂತೆ ಭಾಷೆ ಬದಲಿಸುವುದರಲ್ಲಿ ಪರಿಣಿತನಾಗಿದ್ದ.
ಸೆಟ್ಲ್ಮೆಂಟ್ಗೆ ಬಂದಿದ್ದ:
ಸ್ಯಾಮ್ಪೀಟರ್ ಎರಡು ಪ್ರಕರಣಗಳ ಸೆಟ್ಲ್ಮೆಂಟ್ಗಾಗಿ ಮಂಗಳೂರಿಗೆ ಬಂದಿದ್ದ. ಶರೀಫ್ ಎಂಬಾತ ಅಂತಾರಾಷ್ಟ್ರೀಯ ಸ್ಮಗ್ಲರ್ ಆಗಿದ್ದು, ಈತ ದುಬೈನಿಂದ ಕಳುಹಿಸಿದ ₹ 10 ಕೋಟಿ ಬಂಗಾರವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಈ ಹಣ ಮರಳಿ ಪಡೆಯಲು ಗಿರೀಶ್ ರೈ ಮತ್ತು ಇಮ್ತಿಯಾಝ್ ಎಂಬವರಿಗೆ ಬೆಂಗಳೂರಿನ ವಕೀಲ ಮುಜಾಫರ್ನನ್ನು ಸಂಪರ್ಕಿಸಲು ಶರೀಪ್ ಸೂಚಿಸುತ್ತಾನೆ. ಆದರೆ, ಅವರಿಬ್ಬರು ಅಷ್ಟೂ ಹಣ ಲಪಾಟಾಯಿಸಿ ಪರಾರಿಯಾಗುತ್ತಾರೆ. ಇದರಿಂದ ಕಂಗಲಾದ ಶರೀಫ್ ಆ ಹಣ ವಾಪಾಸು ಪಡೆಯಲು ಒಬ್ಬರನ್ನು ಹುಡುಕುವಂತೆ ಮುಜಾಫರ್ಗೆ ತಿಳಿಸುತ್ತಾನೆ. ಆಗ ಸ್ಯಾಮ್ ಪೀಟರ್ನನ್ನು ನೇಮಿಸುತ್ತಾನೆ.
ಮುಜಾಫರ್ ಮಂಗಳೂರಿನ ತನ್ನ ಸಹಾಯಕ ಲತೀಪ್ ಮೂಲಕ ಸ್ಯಾಮ್ಪೀಟರ್ಗೆ ಸಹಾಯ ಮಾಡುವಂತೆ ತಿಳಿಸುತ್ತಾನೆ. ಅದರಂತೆ ಲತೀಪ್, ಮೊಯ್ದೀನ್ ಎಂಬಾತನ ಜೊತೆಗೂಡಿ ಸಹಾಯ ಮಾಡಿದ್ದ. ಈ ವೇಳೆ ಮಂಗಳೂರಿನ ಹೋಟೆಲ್ನಲ್ಲಿ ತಂಗಿದ್ದಾಗ ಲತೀಪ್ ಮತ್ತು ಮೊಯ್ದೀನ್, ಸ್ಯಾಮ್ ಮತ್ತು ಆತನ 5 ಮಂದಿ ಸಂಗಡಿಗರನ್ನು ಬಂಧಿಸಲಾಯಿತು. ಅಲ್ಲದೆ, ಮೊಯ್ದೀನ್ ಮನೆಯಲ್ಲಿ ಶೋಧ ನಡೆಸಿದಾಗ ಮಾರಾಕಾಸ್ತ್ರಗಳು ಸಿಕ್ಕಿದೆ ಎಂದು ಕಮಿಷನರ್ ತಿಳಿಸಿದರು.
ಮತ್ತೊಂದು ಪ್ರಕರಣದಲ್ಲಿ ಮಠಾಧೀಶರಿಗೆ ಸಂಬಂಧಿಸಿರುವ ವಿವಾದಕ್ಕೆ ಸೆಟ್ಲ್ಮೆಂಟ್ಗಾಗಿ ಉಡುಪಿಯ ರಾಮಚಂದ್ರ ನಾಯಕ್ ಎಂಬವರು ಸ್ಯಾಮ್ನನ್ನು ಕರೆಸಿಕೊಂಡಿದ್ದರು.
ಮಂಗಳೂರಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದ ಖದೀಮರು... ನಕಲಿ ಎನ್ಸಿಐಬಿ ಅಧಿಕಾರಿಗಳು ಅರೆಸ್ಟ್
ಪೊಲೀಸ್ ಅಧಿಕಾರಿಗಳೊಂದಿಗೆ ಪೊಟೋ ತೆಗೆಸಿಕೊಂಡಿದ್ದ: ಐಪಿಎಸ್ ಅಧಿಕಾರಿಗಳ ಪರಿಚಯವಿದೆ ಎಂದು ಬಿಂಬಿಸಲು ಅವರೊಂದಿಗೆ ಪೊಟೋ ತೆಗೆಸಿಕೊಳ್ಳುತ್ತಿದ್ದ. ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದ ಪೊಲೀಸ್ ಅಧಿಕಾರಿಗಳ ಜೊತೆ ಪೊಟೋ ತೆಗೆಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲದೆ, ಸ್ಥಳೀಯ ವಾಹಿನಿಯೊಂದರ ಸಂದರ್ಶನ ಮಾಡಿಸಿಟ್ಟುಕೊಂಡಿದ್ದ. ಈ ವಿಡಿಯೋ ತೋರಿಸಿ ತಾನು ಪ್ರಭಾವಿ ವ್ಯಕ್ತಿ ಎಂದು ಬಿಂಬಿಸುವುದು ಈತನ ಉದ್ದೇಶವಾಗಿತ್ತು ಎಂದು ಕಮಿಷನರ್ ಹೇಳಿದರು.