ಬಂಟ್ವಾಳ : ಹಲವು ಸಮಯದಿಂದ ಬಿ ಸಿ ರೋಡಿನ ತಂಗುದಾಣದಲ್ಲಿ ಬೀಡು ಬಿಟ್ಟಿದ್ದ ಮೈಸೂರು ಮೂಲದ ವೃದ್ಧ ದಂಪತಿ ಕೊನೆಗೂ ಊರಿಗೆ ತೆರಳಿದ್ದಾರೆ. ಬಂಟ್ವಾಳ ಹ್ಯುಮಾನಿಟಿ ಕ್ಲಬ್ ಸಂಘಟಕ ಹಾಗೂ ಸಾಮಾಜಿಕ ಕಾರ್ಯಕರ್ತ ರಾಜ ಚಂಡ್ತಿಮಾರ್ ಈ ವೃದ್ಧ ದಂಪತಿ ಮನವೊಲಿಸಿ ಬಂಟ್ವಾಳನಗರ ಪೊಲೀಸರ ಸಹಕಾರದಿಂದ ಸರ್ಕಾರಿ ಬಸ್ನಲ್ಲಿ ಊರಿಗೆ ಕಳುಹಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ದಂಪತಿ ಹಿಸ್ಟರಿ : ಸುಮಾರು 5 ವರ್ಷಗಳ ಹಿಂದೆ ಈ ವೃದ್ಧ ದಂಪತಿ ನಾಗರಾಜ ಮತ್ತು ಶಾಂತಮ್ಮ ಫರಂಗಿಪೇಟೆಗೆ ಬಂದು ಇಲ್ಲಿ ಹೋಟೆಲ್ವೊಂದರಲ್ಲಿ ಕೆಲಸಕ್ಕಿದ್ದರು. ಸ್ವಲ್ಪ ಸಮಯದ ಬಳಿಕ ಕೆಲಸ ಬಿಟ್ಟು ಬಿಸಿರೋಡಿಗೆ ಬಂದು ಭಿಕ್ಷೆ ಬೇಡುತ್ತಾ ಬಸ್ ತಂಗುದಾಣದಲ್ಲಿ ಬೀಡು ಬಿಟ್ಟಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಬಂಟ್ವಾಳ ಪುರಸಭೆ ಇವರನ್ನು ವಾಮಂಜೂರಿನ ವೃದ್ದಾಶ್ರಮಕ್ಕೆ ಸೇರಿಸಿತ್ತು. ಅಲ್ಲಿ ಜಗಳವಾಡಿ ವಾಪಸ್ ಬಂದು ಅದೇ ತಂಗುದಾಣದಲ್ಲಿ ಮತ್ತೆ ಬೀಡು ಬಿಟ್ಟಟ್ಟಿದ್ದರು. ಮತ್ತೆ ಸಾರ್ವಜನಿಕರ ದೂರಿನನ್ವಯ ಇವರಿಗೆ ಪುರಸಭೆ ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ವಾಜಪೇಯಿ ವಾಣಿಜ್ಯ ಸಂಕೀರ್ಣದ ಖಾಲಿ ಕೊಠಡಿಯೊಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ವೃದ್ಧನಿಗೆ ಮದ್ಯ ಸೇವನೆಯ ಚಟ ಇದ್ದು, ಇಲ್ಲಿ ಅಮಲು ಪದಾರ್ಥ ಸೇವಿಸಿ ಬಂದು ಜಗಳವಾಡುತ್ತಿದ್ದರು. ಇದರಿಂದ ಅಕ್ಕಪಕ್ಕದ ಅಂಗಡಿಯವರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಸ್ವಲ್ಪ ಸಮಯದ ಬಳಿಕ ಈ ಕೊಠಡಿ ಖಾಲಿ ಮಾಡಿದ ದಂಪತಿ ಪುನಃ ಬಸ್ ತಂಗುದಾಣಕ್ಕೆ ಶಿಫ್ಟ್ ಆದರು. ಈ ಹಂತದಲ್ಲಿ ವೃದ್ಧೆಗೆ ಪುರಸಭೆಯ ವತಿಯಿಂದ ಕಣ್ಣಿನ ಚಿಕಿತ್ಸೆ ಮಾಡಿಸಲಾಗಿತ್ತು. ಇತ್ತೀಚೆಗೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್ ಆದರೂ ಇವರು ಮಾತ್ರ ಬಸ್ ತಂಗುದಾಣ ಬಿಟ್ಟು ಕದಲಲಿಲ್ಲ.
ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಪರಿಸರ ವಿಭಾಗದ ಸಹಾಯಕ ಇಕ್ಬಾಲ್ ಸಹಿತ ಹಲವು ಮಂದಿ ಊರಿಗೆ ಕಳುಹಿಸಿ ಕೊಡುವ ನಿಟ್ಟಿನಲ್ಲಿ ಸತತ ಪ್ರಯತ್ನಪಟ್ಟರೂ ಈ ವೃದ್ಧ ದಂಪತಿ ಬಿಸಿರೋಡ್ ಬಿಟ್ಟು ತೆರಳಲು ಒಪ್ಪಲಿಲ್ಲ. ಲಾಕ್ಡೌನ್ ಸಂದರ್ಭ ಪುರಸಭೆಯ ವತಿಯಿಂದ ಇವರಿಗೆ ಪ್ರತಿದಿನ ಬಂಟವಾಳ ಶ್ರೀ ತಿರುಮಲ ವೆಂಕಟರಮಣ ದೇವಳದ ನೈವೇದ್ಯದ ಅನ್ನಪ್ರಸಾದವನ್ನು ವಿತರಿಸಲಾಗುತಿತ್ತು.