ಮಂಗಳೂರು: ಕಡಬ ತಾಲೂಕಿನ ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ಮನೆಯೊಂದರಿಂದ ಚಿನ್ನ, ನಗದು ಇದ್ದ ಬ್ಯಾಗ್ ಕಳ್ಳತನವಾಗಿದೆ. ಮಾತ್ರವಲ್ಲದೇ ಸಮೀಪದ ಎರಡು ಮನೆಗಳಿಂದಲೂ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ.
ಕಡಬ ಠಾಣಾ ವ್ಯಾಪ್ತಿಯ ನೀರಾಜೆ ನಿವಾಸಿ ಅಬೂಬಕ್ಕರ್ ಯಾನೆ ಪುತ್ತುಕುಂಜೆ ಎಂಬವರ ಮನೆಯಲ್ಲಿ ಮಲಗಿದ್ದ ಮಹಿಳೆಯೋರ್ವರ ಕಾಲಿನಿಂದ 4 ಪವನ್ ತೂಕದ ಕಾಲು ಚೈನು, ಹಣವಿದ್ದ ವ್ಯಾನಿಟಿ ಬ್ಯಾಗ್ ಕಳ್ಳತನ ಮಾಡಲಾಗಿದೆ. ಇವರ ಮನೆ ಸಮೀಪದ ನೀರಾಜೆ ನಿವಾಸಿಗಳಾದ ರಝಾಕ್ ಮತ್ತು ಉಮ್ಮರ್ ಎಂಬವರ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ಕಿಟಕಿಯ ಪಕ್ಕ ಮಲಗಿದ್ದ ಕಾರಣ ಬಾಗಿಲು ತೆಗೆದು ಮಹಿಳೆಯ ಎರಡೂ ಕಾಲಿನಲ್ಲಿದ್ದ ತಲಾ 2 ಪವನ್ ತೂಕದ ಒಟ್ಟು ಎರಡು ಚಿನ್ನದ ಸರ ಕಳವು ಮಾಡಲಾಗಿದೆ. ಮನೆಯವರು ಕಡಬ ಪೊಲೀಸರಿಗೆ ದೂರು ನೀಡಿದ್ದು ಮಂಗಳೂರಿನಿಂದ ಶ್ವಾನದಳ ಕರೆಸಿ ತನಿಖೆ ನಡೆಸಲಾಗಿದೆ.
ನೀರಾಜೆ ನಿವಾಸಿ ಉಪ್ಪಿನಂಗಡಿಯಲ್ಲಿ ಟೈಲರ್ ಆಗಿರುವ ರಝಾಕ್ ರವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಲು ಯತ್ನಿಸಲಾಗಿದ್ದಾರೆ. ಆದರೆ ಶಬ್ದ ಕೇಳಿ ಮನೆಯವರು ಎಚ್ಚರಗೊಂಡ ವೇಳೆ ಕಳ್ಳರು ಪರಾರಿಯಾಗಿರುವುದಾಗಿ ಹೇಳಲಾಗಿದೆ.
ನೀರಾಜೆ ನಿವಾಸಿ ಉಮ್ಮರ್ ಎಂಬವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಲು ಯತ್ನಿಸಲಾಗಿದೆ. ಇವರ ಮನೆಯ ಹಿಂಬಾಗಿಲನ್ನು ಹೊರಗಿನಿಂದ ದೂಡಿದ ಪರಿಣಾಮ ಬಾಗಿಲಿನ ಒಳಗಿನ ಚಿಲಕ ಮುರಿದು ಕೆಳಕ್ಕೆ ಬಿದ್ದಿದೆ. ಮನೆಯವರು ಬೆಳಿಗ್ಗೆ ಎದ್ದ ವೇಳೆ ಹಿಂಬಾಗಿಲು ತೆಗೆದುಕೊಂಡಿರುವುದು ಗಮನಕ್ಕೆ ಬಂದಿದೆ. ಈ ಎರಡೂ ಮನೆಯಿಂದ ಯಾವುದೇ ಕಳ್ಳತನವಾಗಿಲ್ಲ ಎಂದು ವರದಿಯಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.