ಮಂಗಳೂರು: ರಾಜ್ಯಪಾಲರಿಗೆ ಪತ್ರ ಬರೆದ ವಿಚಾರದ ಕುರಿತು ಸ್ಪಷ್ಟನೆ ನೀಡಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ನಾವು ದೂರು ಕೊಟ್ಟದ್ದಲ್ಲ, ನನಗೆ ವ್ಯವಹಾರ ಹಾಗೂ ವ್ಯಾಪಾರ ನೀತಿ ಸರಿ ಕಂಡುಬಂದಿಲ್ಲ. ಅದಕ್ಕಾಗಿ ತಮ್ಮ ಮಾರ್ಗದರ್ಶನದ ಅಗತ್ಯವಿದೆ ಎಂದು ರಾಜ್ಯಪಾಲರಿಗೆ ತಿಳಿಸಿದೆ ಎಂದು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ನ ವಿವಿಧ ಕಾರ್ಯಕ್ರಮಗಳ ಟೆಂಡರ್ನಲ್ಲಿ ಪಾರದರ್ಶಕತೆ ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇದುವರೆಗೂ ಯಾವುದೇ ಟೆಂಡರ್ ಪಾರದರ್ಶಕತೆ ಇಲ್ಲದೆ ಆಗಿಲ್ಲ. ನಮ್ಮ ಇಲಾಖೆಗೆ ಬರುವ ಹಣ ಆರ್ಥಿಕ ಇಲಾಖೆಯಿಂದ ಹೋಗುತ್ತದೆ. ಹಾಗೆ ಹೋದಂತಹ ಹಣವನ್ನು ಆ ಇಲಾಖೆಯವರೇ ಖರ್ಚು ಮಾಡುತ್ತಾರೆ. ಇದು ವ್ಯವಸ್ಥೆ ಎಂದು ಹೇಳಿದರು.
ಗ್ರಾಮ ಪಂಚಾಯತ್ಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ನಮ್ಮ ಸರ್ಕಾರ ಬಂದ ಕೂಡಲೇ ಸಿಬ್ಬಂದಿ ನೇಮಕಕ್ಕೆ ಒತ್ತು ನೀಡುವುದರ ಬಗ್ಗೆ ಆಲೋಚಿಸಿದಾಗ ಮೊದಲಿಗೆ ನೆರೆ, ಆ ಬಳಿಕ ಕೊರೊನಾ ಆವರಿಸಿತು. ಅದನ್ನೆಲ್ಲಾ ಸುಧಾರಿಸಿ ಕೂಡ ಗ್ರಾಪಂ ಮಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಸಿಬ್ಬಂದಿ ಭರ್ತಿ ಮಾಡಲು ಸದ್ಯಕ್ಕೆ ಹಣಕಾಸಿನ ಸಮಸ್ಯೆಯಿದೆ. ಆದರೆ ಅಭಿವೃದ್ಧಿ ಕುಂಠಿತ ಆಗಬಾರದು ಎನ್ನುವ ಉದ್ದೇಶದಿಂದ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿದ್ದೇವೆ. ಮುಂದಿನದನ್ನು ಉಪಚುನಾವಣೆ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ತಾ.ಪಂ ರದ್ದು ಮಾಡಲು ರಾಜ್ಯ ಸರ್ಕಾರಕ್ಕೆ ಪೂರ್ಣ ಅಧಿಕಾರವಿಲ್ಲ. ಸಂವಿಧಾನದಲ್ಲಿಯೇ ಈ ತೀರ್ಮಾನವನ್ನು ಬದಲಾವಣೆ ಮಾಡಬೇಕಾದರೆ ದೇಶದ ಎಲ್ಲಾ ರಾಜ್ಯ ಸರ್ಕಾರಗಳು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಅವರ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಕೇಂದ್ರ ಸರ್ಕಾರ ಆಗ ಸಂವಿಧಾನ ತಿದ್ದುಪಡಿ ಮಾಡಬೇಕು. ಮೊನ್ನೆ ನಡೆದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಲು ಸಮಯಾವಕಾಶ ಇರಲಿಲ್ಲ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಏನು ತೀರ್ಮಾನ ಆಗುತ್ತೋ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಈ ಬಾರಿ ತಾಪಂ ಹಾಗೂ ಜಿ.ಪಂ ಚುನಾವಣೆ ಜೊತೆಗೆ ನಡೆಯಲಿದೆ ಎಂದು ಹೇಳಿದರು.
ಮಳೆನೀರು ಸಮುದ್ರಕ್ಕೆ ಹೋಗುವುದನ್ನು ಕಡಿಮೆ ಮಾಡಿ ಭೂಮಿಯಲ್ಲಿ ಇಂಗಿಸುವ ಉದ್ದೇಶದಿಂದ ಜಲಶಕ್ತಿ ಅಭಿಯಾನ (ಕ್ಯಾಚ್ ದಿ ರೈನ್) ಅಭಿಯಾನಕ್ಕೆ ಮಾ.22 ರಂದು ಪ್ರಧಾನಿಯವರು ಚಾಲನೆ ನೀಡಿದ್ದು, ಇದು ನ.30 ರ ವರೆಗೆ ನಡೆಯಲಿದೆ. ಈ ಅಭಿಯಾನಕ್ಕೆ ರಾಜ್ಯದಲ್ಲಿಯೂ ಚಾಲನೆ ನೀಡುವ ಉದ್ದೇಶದಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಮಾರ್ಗಸೂಚಿ ಹೊರಡಿಸಲಾಗಿದೆ. ಮೊದಲನೆಯದಾಗಿ ಈ ಅಭಿಯಾನ ಹುಬ್ಬಳ್ಳಿಯಲ್ಲಿ ಆರಂಭವಾಗಲಿದ್ದು, ಮುಂದಿನ ನೂರು ದಿನಗಳಲ್ಲಿ ಜಲಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಮಗ್ರ ಕೆರೆ ಅಭಿವೃದ್ಧಿ, ಕೆರೆಗೆ ನೀರು ಹರಿದು ಬರಲು ಕಾಲುವೆಗಳ ಪುನಶ್ಚೇತನ, ಹೂಳೆತ್ತುವುದು, ಕೆರೆಯ ಏರಿ ದುರಸ್ತಿ, ಕೆರೆಯಂಚಿನ ಪ್ರದೇಶದಲ್ಲಿ ಸಸಿಗಳನ್ನು ಬೆಳೆಸುವುದು, ಬದುಗಳ ನಿರ್ಮಾಣಕ್ಕೆ ಒತ್ತು, ರಾಜ್ಯದ ಎಲ್ಲಾ ದೇವಾಲಯಗಳ ಕಲ್ಯಾಣಿಗಳ ಪುನಶ್ಚೇತನ, ಮಳೆ ನೀರು ಕೊಯ್ಲು, ಅರಣ್ಯೀಕರಣ ಕಾಮಗಾರಿ, ಚೆಕ್ ಡ್ಯಾಂಗಳ ಹೂಳೆತ್ತುವುದು ಇತ್ಯಾದಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಲಶಕ್ತಿ ಅಭಿಯಾನ ಅನುಷ್ಠಾನದಲ್ಲಿ ತೊಡಗಿಕೊಳ್ಳುವ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ತರುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.