ಮಂಗಳೂರು: ಮುಂದಿನ ಮೂರುವರೆ ವರ್ಷಗಳಲ್ಲಿ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ನಮ್ಮ ಪ್ರತಿಯೊಬ್ಬ ಶಾಸಕರು ಏನೇನು ಅಪೇಕ್ಷೆ ಪಡುತ್ತಾರೋ, ಅದನ್ನು ಪೂರ್ಣಗೊಳಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಬೆಳ್ತಂಗಡಿ ತಾಲೂಕಿನ ರತ್ನವರ್ಮ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ₹ 347 ಕೋಟಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿ, ನಾವು ಸ್ವಚ್ಚ, ದಕ್ಷ ಹಾಗೂ ಪ್ರಾಮಾಣಿಕ ಆಡಳಿತವನ್ನು ನೀಡುವ ಭರವಸೆ ನೀಡುತ್ತೇನೆ. ಬೆಳ್ತಂಗಡಿ ತಾಲೂಕಿನ ಕಣಿಯಾರ ಕ್ಷೇತ್ರವನ್ನು ಹೊಸ ಹೋಬಳಿಯನ್ನಾಗಿ ಘೋಷಣೆ ಮಾಡಿದ್ದೇನೆ. ತಾಲೂಕಿನ ಕೃಷಿಕರಿಗೆ ಅನುಕೂಲ ಮಾಡಲು ಪಶ್ಚಿಮ ವಾಹಿನಿ ಯೋಜನೆ ಮೂಲಕ ಕಿಂಡಿ ಅಣೆಕಟ್ಟುವಿಗೆ ಅನುದಾನ, ರಿಕ್ಷಾ ತಂಗುದಾಣಕ್ಕೆ ಅನುದಾನ, ಎಂಡೋ ಪೀಡಿತರಿಗೆ ಎಂಡೋಸಲ್ಫಾನ್ ಅನುದಾನ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ದ.ಕ.ಜಿಲ್ಲಾ ಶಾಸಕರಾದ ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಭರತ್ ಶೆಟ್ಟಿ ಇದ್ದರು.