ಬಂಟ್ವಾಳ (ದ.ಕ): ತಾಲೂಕಿನ ಪೆರ್ಲಾಪು ಎಂಬಲ್ಲಿನ ಕಡೇಶಿವಾಲಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಕೃಷಿ ಚಟುವಟಿಕೆಗಳಿಂದ ಸುದ್ದಿಯಲ್ಲಿದ್ದು, ಇತರೆ ಶಾಲೆಗಳಿಗೆ ಮಾದರಿಯಾಗಿದೆ.
ಕಡೇಶಿವಾಲಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಸ್ವಚ್ಛವಾದ ಪರಿಸರದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಶಾಲೆಯಲ್ಲಿರುವ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಕೈ ತೋಟ ಮಾಡಿದ್ದು, ಅದರಲ್ಲಿ ನೆಟ್ಟಿರುವ ಅಡಿಕೆ ಮರಗಳು ಫಲ ಕೊಡುವ ಹಂತದಲ್ಲಿವೆ.
![school garden](https://etvbharatimages.akamaized.net/etvbharat/prod-images/13705165_thum.jpg)
ಭಾಸ್ಕರ ನಾಯ್ಕ್ ಎಂಬುವವರು ಈ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲಿರುವ ಒಂದೂವರೆ ಎಕರೆ ಶಾಲಾ ಪ್ರದೇಶದಲ್ಲಿ ಇತರೆ ಶಿಕ್ಷಕರ ಸಹಾಯದಿಂದ ಕೈ ತೋಟವನ್ನು ನಿರ್ಮಿಸಿದ್ದಾರೆ. ಅದರಲ್ಲಿ ತರಕಾರಿ, ಔಷಧಿ, ವಿವಿಧ ಹಣ್ಣು ಹಾಗೂ ತೆಂಗಿನ ಮರಗಳು ಸೇರಿದಂತೆ 60 ಅಡಿಕೆ ಮರಗಳನ್ನು ಬೆಳೆಸಿದ್ದಾರೆ. ಅವುಗಳೀಗ ಫಲ ಕೊಡುವ ಹಂತದಲ್ಲಿವೆ. ಕೈ ತೋಟ ತರಕಾರಿಗಳಿಗೆ ಕ್ರಿಮಿನಾಶಕ ಬಳಸದೆ ಕೇವಲ ಎಲೆಗೊಬ್ಬರ ಮಾತ್ರ ಬಳಸಲಾಗುತ್ತಿದೆ. ಇಲ್ಲಿ ಇಲ್ಲಿ ಬೆಳೆದ ತರಕಾರಿಗಳನ್ನು ಅಡುಗೆಗೆ ಬಳಸಲಾಗುತ್ತದೆ.
![school garden](https://etvbharatimages.akamaized.net/etvbharat/prod-images/13705165_thussm.jpg)
ಕೃಷಿ ನನ್ನ ಹವ್ಯಾಸ. ಮಕ್ಕಳಿಗೂ ಇದರ ಪಾಠ ಮಾಡುವ ಮೂಲಕ ಅವರಲ್ಲೂ ಆಸಕ್ತಿ ಬೆಳೆಯಲು ಕೈತೋಟ ಕಾರಣವಾಯಿತು. ಹಲವು ಹಿರಿಯ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಕೈತೋಟ ಮಾಡುವುದಕ್ಕೆ ನಮ್ಮ ಶಾಲೆಯ ಕೈತೋಟ ಪ್ರೇರಣೆಯಾಗಿದೆ. ಗಿಡ ನೆಟ್ಟವರು ಇಂದು ಕಾಲೇಜಿಗೆ ಹೋಗುತ್ತಿದ್ದಾರೆ. ಆದರೂ ಪ್ರೀತಿಯಿಂದ ಇಲ್ಲಿಗೆ ಬಂದು ಗಿಡದ ಬೆಳವಣಿಗೆ ನೋಡುತ್ತಿದ್ದಾರೆ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ ನಾಯ್ಕ್.
![school garden](https://etvbharatimages.akamaized.net/etvbharat/prod-images/kn-mng-bantwal-02-kaitota-visual-kac10019_22112021172647_2211f_1637582207_33.jpg)
ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಭಾಸ್ಕರ ನಾಯ್ಕ್ ಅವರು ವಿಶೇಷ ಮುತುವರ್ಜಿಯಿಂದ ಮಕ್ಕಳಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡಿದೆ. ಇಡೀ ಶಾಲೆಯ ಪರಿಸರವನ್ನು ಸಮೃದ್ಧ ಕೃಷಿಯುಕ್ತವನ್ನಾಗಿಸಿದ್ದಾರೆ. ಶಿಕ್ಷಕರು, ಮಕ್ಕಳು, ಪೋಷಕರ ಪ್ರೋತ್ಸಾಹದಿಂದ ಶಾಲೆಯ ಕೈತೋಟ ಗಮನ ಸೆಳೆಯುವಂತಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಉಮಾವತಿ ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: ಹುಣಸೂರಲ್ಲಿ ಕೆರೆ ಏರಿ ಮೇಲೆ ಸೆಲ್ಫಿ ತೆಗೆಯಲು ಹೋಗಿ ಸ್ನೇಹಿತರಿಬ್ಬರು ನೀರುಪಾಲು: ಓರ್ವ ಪಾರು